ಬೀದರ್: ಜನಸಂಖ್ಯೆಯು ಬೆಳೆದಂತೆಲ್ಲಾ ವಸತಿಯೊಂದಿಗೆ ಕಾಡುವ ಇನ್ನೊಂದು ಸಮಸ್ಯೆ ಮನುಷ್ಯ ಚಿರನಿದ್ರೆಗೆ ಜಾರಿದ ಬಳಿಕ ಅಂತಿಮ ಕ್ರಿಯೆಗಳನ್ನು ಬೇಕಾದ ರುದ್ರಭೂಮಿಯದ್ದು. ನಗರದಲ್ಲಿರುವ ಸಾರ್ವಜನಿಕ ರುದ್ರಭೂಮಿಯಲ್ಲೂ ಈಗ ಸ್ಥಳದ ಸಮಸ್ಯೆ ಎದುರಾಗಿದೆ. ಅಲ್ಲಿರುವ ಸಮಾಧಿಗಳೇ ಸಮಸ್ಯೆಯಾಗಿವೆ!
ಗುಂಪಾ ರಸ್ತೆಯಲ್ಲಿ ಬಿ.ವಿ.ಭೂಮರೆಡ್ಡಿ ಕಾಲೇಜು ಬಳಿಯ ರುದ್ರಭೂಮಿ ಲಭ್ಯ ಮಾಹಿತಿ ಪ್ರಕಾರ, ಸುಮಾರು ಐದು ಎಕರೆ ವ್ಯಾಪ್ತಿಯಲ್ಲಿದೆ. ಪ್ರಸ್ತುತ ಮೂಲಸೌಕರ್ಯಗಳ ಕೊರತೆಯಿಂದಾಗಿ ಸಮಾಧಿ ನಿರ್ಮಾಣ ಮಾಡುವ, ಅಂತ್ಯಕ್ರಿಯೆ ನೆರವೇರಿಸುವ ಪ್ರಕ್ರಿಯೆ ರುದ್ರಭೂಮಿ ಪ್ರದೇಶದ ಒಂದು ಭಾಗಗಷ್ಟೇ ಸೀಮಿತವಾಗಿದೆ.
ಆ ಜಾಗವನ್ನೂ ಬಹುತೇಕ ಸಮಾಧಿಗಳೇ ಆವರಿಸಿರುವ ಕಾರಣ, ಹೊಸದಾಗಿ ಸಮಾಧಿ ನಿರ್ಮಾಣ ಮಾಡುವುದಿರಲಿ, ಅಂತ್ಯ ಸಂಸ್ಕಾರ ಗಳಿಗೂ ಸ್ಥಳಾವಕಾಶದ ಸಮಸ್ಯೆಯಾಗಿದೆ ಎಂಬುದು ಸಾರ್ವಜನಿಕರ ದೂರು.
ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈಗ ನಿರ್ಮಾಣ ಮಾಡಿರುವ ಸಮಾಧಿಗಳನ್ನು ಸಂಬಂಧಿಸಿದ ಸಾರ್ವಜನಿಕರೇ ಸ್ವಯಂ ಪ್ರೇರಿತವಾಗಿ ತೆರವುಗೊಳಿಸಬೇಕು ಎಂದು ಜಿಲ್ಲಾಡಳಿತ ಈಚೆಗೆ ಆದೇಶ ಹೊರಡಿಸಿತ್ತು. ಆದರೆ ಆ ಆದೇಶವೂ ಒಂದು ವರ್ಗದ ಕೋಪಕ್ಕೆ ತುತ್ತಾಗಿದೆ.
ಇನ್ನೊಂದೆಡೆ ಇಂಥ ಕೋಪಕ್ಕೆ ವಾಸ್ತವ ಸ್ಥಿತಿ ತಿಳಿಯದೇ ಜಿಲ್ಲಾಧಿಕಾರಿಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ವ್ಯಕ್ತ ಮಾಡಲಾಗುತ್ತಿದೆ ಎಂಬ ಅಸಮಾಧಾನವೂ ವ್ಯಕ್ತವಾಗಿದೆ.
ಇದು ಭಾವನಾತ್ಮಕವಾದ ವಿಷಯ. ಸಮಾಧಿ ಕೆಡವಲು ಆದೇಶಿಸುವುದು ಸರಿಯಲ್ಲ’ ಎಂದು ಬಿಜೆಪಿಯ ಯುವ ಘಟಕ ಟೀಕಿಸಿದೆ.
ಅತ್ತ ಜಿಲ್ಲಾಧಿಕಾರಿಗಳ ಬೆಂಬಲಕ್ಕೆ ನಿಂತಿರುವ ಕೆಲ ಸಮುದಾಯದ ಪ್ರಮುಖರು, ‘ಸಮಾಧಿಗಳನ್ನು ತೆರವುಗೊಳಿಸಬೇಕು ಎಂಬುದು ವಿವಿಧ ಜಾತಿ, ಸಂಘಟನೆಗಳ ಮುಖಂಡರು ಭಾಗವಹಿಸಿದ್ದ ಸಭೆಯ ತೀರ್ಮಾನ. ಅದನ್ನು ಜಿಲ್ಲಾಧಿಕಾರಿಗಳು ಜಾರಿಗೆ ತರಲು ಮುಂದಾಗಿದ್ದಾರೆ. ಈ ವಿಷಯದಲ್ಲಿ ಅವರ ದೂಷಣೆ ಸಲ್ಲದು’ ಎನ್ನುತ್ತಾರೆ. ರುದ್ರಭೂಮಿ ಒಟ್ಟು ಜಾಗ ಹೆಚ್ಚಿದ್ದರೂ, ಗಟ್ಟಿಯಾದ ಕಲ್ಲುಗಳಿರುವ ಭೂಮಿ. ಜೊತೆಗೆ ಜನರು ಕುಳಿತುಕೊಳ್ಳಲು ನೆರಳಿನ ವ್ಯವಸ್ಥೆ, ನೀರು ಸೌಲಭ್ಯ, ಸುತ್ತುಗೋಡೆ ಇಲ್ಲ. ಎಲ್ಲರೂ ಸಮಾಧಿ ಕಟ್ಟುತ್ತಾ ಹೋದರೆ ಹೊಸದಾಗಿ ಸಾವಿನ ಪ್ರಕರಣಗಳಲ್ಲಿ ಏನು ಮಾಡಬೇಕು. ಶವದ ಅಂತ್ಯಕ್ರಿಯೆಗೆ ಜಾಗವಾದರೂ ಬೇಕಲ್ಲ? ಹಳೆಯ ಸಮಾಧಿಗಳನ್ನು ತೆರವುಗೊಳಿಸುವುದೇ ಪರಿಹಾರ’ ಎನ್ನುತ್ತಾರೆ ಲಿಂಗಾಯತ ಅಭಿವೃದ್ಧಿ ಸಮಾಜದ ಅಧ್ಯಕ್ಷ ಬಿ.ಜಿ ಶೆಟಕಾರ್.
ಈ ಹಿಂದಿನ ಸಭೆಯಲ್ಲಿಯೇ ಈ ನಿರ್ಣಯ ಆಗಿದ್ದು, ಅದರ ಪ್ರಕಾರ, ಈಗಿರುವ ಸಮಾಧಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಮತ್ತು ರುದ್ರಭೂಮಿಯ ಸುತ್ತಲೂ ಸುತ್ತುಗೋಡೆ ನಿರ್ಮಾಣ ಸೇರಿದಂತೆ ಮೃತರ ಕುಟುಂಬದ ಸದಸ್ಯರು, ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲು ಬೇಕಾದ ಸೌಲಭ್ಯಗಳನ್ನು ಒದಗಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಪ್ರಮುಖರು ಒತ್ತಾಯಿಸಿದ್ದರು.
ಕೋಮು ಸೌಹಾರ್ದ ವೇದಿಕೆಯ ಅಧ್ಯಕ್ಷ ಶಿವಶರಣಪ್ಪ ವಾಲಿ, ‘ವಿವಿಧ ಮುಖಂಡರು ಭಾಗವಹಿಸಿದ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ವಾಸ್ತವವನ್ನು ಅರಿಯದೇ ಹೇಳಿಕೆ ನೀಡುವುದು ಸೌಹಾರ್ದತೆ ಕಡುವ ಯತ್ನವಾಗುತ್ತದೆ’ ಎಂದು ಹೇಳುತ್ತಾರೆ.
ರುದ್ರಭೂಮಿಯಲ್ಲಿ ಸೌಲಭ್ಯ ಉತ್ತಮ ಪಡಿಸುವುದರ ಪರ ಬಹುತೇಕ ಮುಖಂಡರು ಇರುವ ಕಾರಣ, ಜಿಲ್ಲಾಡಳಿತ ಪೂರಕವಾಗಿ ಸೌಲಭ್ಯ ಉತ್ತಮಪಡಿಸಲು ಮುಂದಾಗಬೇಕು ಎಂದು ಮನವಿಯೂ ವ್ಯಕ್ತವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.