ಬೆಂಗಳೂರು: ವಿವಿಧ ಅಪರಾಧ ಪ್ರಕರಣಗಳನ್ನು ಭೇದಿಸಿರುವ ನಗರದ ದಕ್ಷಿಣ ವಿಭಾಗದ ಪೊಲೀಸರು 106 ಆರೋಪಿಗಳನ್ನು ಬಂಧಿಸಿ ರೂ 2.12 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
‘ಸಿಬ್ಬಂದಿ ಎರಡು ತಿಂಗಳಲ್ಲಿ 161 ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಿ ರೂ 8.83 ಲಕ್ಷ ನಗದು, ಸುಮಾರು ಮೂರು ಕೆ.ಜಿ ಚಿನ್ನಾಭರಣ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿಗೆ ಒಟ್ಟು ರೂ 2 ಲಕ್ಷ ಬಹುಮಾನ ನೀಡಲಾಗುತ್ತದೆ’ ಎಂದು ನಗರ ಪೊಲೀಸ್ ಕಮಿಷನರ್ ರಾಘವೇಂದ್ರ ಔರಾದಕರ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇದೇ ವೇಳೆ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ‘ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಪೊಲೀಸರಿಗೆ ಸಹಕಾರ ನೀಡಬೇಕು’ ಎಂದರು.
ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಪೊಲೀಸರು ಬೈಕ್ ರ್್ಯಾಲಿ ನಡೆಸಿದರು.
ಗಿರಿನಗರ: ಪೂರ್ಣಿಮಾ ದಿನೇಶ್ ಎಂಬ ವೈದ್ಯೆಯನ್ನು ಅಡ್ಡಗಟ್ಟಿ ಚಿನ್ನಾಭರಣ ದೋಚಿದ್ದ ಆರೋಪದ ಮೇಲೆ ಚನ್ನಮ್ಮನಕೆರೆ ಅಚ್ಚುಕಟ್ಟಿನ ಬಾಲಾಜಿ ಲೇಔಟ್ ನ ಮುರಳಿ (24) ಎಂಬಾತನನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ನ.26 ರಂದು ರಾತ್ರಿ ಗಿರಿನಗರ 1ನೇ ಹಂತದಲ್ಲಿ ಬೈಕ್ನಲ್ಲಿ ಹೋಗುತ್ತಿದ್ದ ಪೂರ್ಣಿಮಾ ಅವರನ್ನು ಅಡ್ಡಗಟ್ಟಿ 60 ಗ್ರಾಂ ತೂಕದ ಚಿನ್ನದ ಸರ ಮತ್ತು ಬೈಕ್ ಕಿತ್ತುಕೊಂಡು ಪರಾರಿಯಾಗಿದ್ದ.
ಕುದುರೆ ಜೂಜಿನಲ್ಲಿ ಹಣ ಕಳೆದುಕೊಂಡಿದ್ದ ಮುರಳಿ, ಸಾಲದ ಹಣ ತೀರಿಸುವ ಉದ್ದೇಶಕ್ಕಾಗಿ ಈ ಕೃತ್ಯ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಂಪೇಗೌಡನಗರ: ರಾಜರಾಜೇಶ್ವರಿನಗರ ಸಮೀಪದ ಕೆಂಚೇನಹಳ್ಳಿಯ ಲೋಕೇಶ್ (38) ಎಂಬಾತನನ್ನು ಬಂಧಿಸಿರುವ ಕೆಂಪೇಗೌಡನಗರ ಪೊಲೀಸರು 350 ಗ್ರಾಂ ಆಭರಣ ಗಳನ್ನು ವಶಪಡಿಸಿ ಕೊಂಡಿದ್ದಾರೆ.
ನಗರ್ತಪೇಟೆಯ ಸುರೇಶ್ ಜ್ಯುವೆಲರ್ಸ್ ಮಳಿಗೆಯಲ್ಲಿ 20 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಆತ ಮಾಲೀಕರಿಗೆ ಗೊತ್ತಾಗದಂತೆ ಹಲವು ಬಾರಿ ಚಿನ್ನಾಭರಣ ಕಳವು ಮಾಡಿ, ಆಭರಣಗಳನ್ನು ಮಾರಾಟ ಮಾಡಿ ಕೆಂಚೇನಹಳ್ಳಿಯಲ್ಲಿ ಸುಮಾರು ರೂ 70 ಲಕ್ಷ ಮೌಲ್ಯದ ಮನೆ ಕಟ್ಟಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.