ಹರಪನಹಳ್ಳಿ: ಗುರುವಾರ ರಾತ್ರಿ ಸಂಭವಿಸಿದ ಆಕಸ್ಮಿಕ ಅಗ್ನಿ ಅನಾಹುತದಿಂದಾಗಿ ್ಙ 4 ಲಕ್ಷಗಳಿಗೂ ಅಧಿಕ ಮೌಲ್ಯದ ಮೆಕ್ಕೆಜೋಳ ಹಾಗೂ ಹೈಬ್ರಿಡ್ಜೋಳದ ಫಲಭರಿತ ತೆನೆಗಳ ರಾಶಿ ಭಸ್ಮವಾದ ಘಟನೆ ತಾಲ್ಲೂಕಿನ ಪುಣಭಘಟ್ಟ ತಾಂಡಾದಲ್ಲಿ ನಡೆದಿದೆ.
ಊರ ಹೊರವಲಯದಲ್ಲಿನ ಕಣದಲ್ಲಿ ಸಂಬಂಧಿಕರ 6ಜನ ರೈತರು ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಹಾಗೂ ಹೈಬ್ರಿಡ್ಜೋಳದ ತೆನೆಗಳನ್ನು ಕಟಾವುಮಾಡಿ, ಕಣದಲ್ಲಿ ಸಂಗ್ರಹಿಸಿಟ್ಟಿದ್ದ ಕಾಳುಭರಿತ ತೆನೆ ಹಾಗೂ ಜಾನುವಾರುಗಳಿಗೆಂದು ಸಂಗ್ರಹಿಸಿಟ್ಟಿದ್ದ ಹುಲ್ಲಿನ ಭಣವೆಯೂ ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ.
ಕೂಡಲೇ ಅಗ್ನಿಶಾಮಕ ದಳ ಹಾಗೂ ತುರ್ತುಸೇವಾ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಬೆಂಕಿ ನಂದಿಸಲು ಹರಸಾಹಸ ನಡೆಸಿದ್ದಾರೆ. ಆದರೆ, ಬೆಂಕಿ ಹತೋಟಿಗೆ ಬಾರದೆ ಇದ್ದರಿಂದ ದಾವಣಗೆರೆಯಿಂದಲೂ ಮತ್ತೊಂದು ಅಗ್ನಿಶಾಮಕ ವಾಹನ ತರಿಸಿಕೊಂಡಿದ್ದಾರೆ. ಒಟ್ಟು ಎರಡು ವಾಹನಗಳು ನಿರಂತರವಾಗಿ ಕಾರ್ಯಾಚರಣೆ ನಡೆಸಿ ಬೆಂಕಿ ನಿಯಂತ್ರಿಸಿವೆ.
ಗ್ರಾಮದ ಹಾಲೇಶ್ನಾಯ್ಕ, ತುಳಜಾನಾಯ್ಕ, ಪಿತ್ಯಾನಾಯ್ಕ, ಹೇಮ್ಲಾನಾಯ್ಕ, ನಾಗಮ್ಮ ಹಾಗೂ ರಂಗಪ್ಪ ಎಂಬುವವರು ಒಕ್ಕಲು ಮಾಡಲು ಕಣದಲ್ಲಿ ತೆನೆಗಳ ರಾಶಿಯನ್ನು ಪ್ರತ್ಯೇಕವಾಗಿ ಸಂಗ್ರಹಿಸಿದ್ದರು ಎನ್ನಲಾಗಿದೆ. ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಹಾನಿಯ ಪರಿಶೀಲನೆ ನಡೆಸಿದ್ದಾರೆ.