ಬಾಗಲಕೋಟೆ: ಬಾಗಲಕೋಟೆ ಮತ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶ ಗಳಲ್ಲಿ ಶುದ್ಧ ಕುಡಿಯುವ ನೀರು, ಕಾಂಕ್ರೀಟ್ ರಸ್ತೆ, ಚರಂಡಿ ನಿರ್ಮಾಣ, ಸಮುದಾಯ ಭವನ ಸೇರಿದಂತೆ ರೂ. 4.48 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ವೀರಣ್ಣ ಚರಂತಿಮಠ ಇತ್ತೀಚೆಗೆ ಭೂಮಿ ಪೂಜೆ ನೆರವೇರಿಸಿದರು.
ಲೋಕೋಪಯೋಗಿ, ಪಂಚಾಯತ್ರಾಜ್, ನಿರ್ಮಿತಿ ಕೇಂದ್ರ, ಯುಕೆಪಿ, ಕೆ.ಆರ್.ಐ. ಡಿ.ಎಲ್. ವತಿಯಿಂದ ಮುಚಖಂಡಿ, ಮನ್ನಿಕಟ್ಟಿ, ಕಡ್ಲಿಮಟ್ಟಿ, ಮುಡಪಲಜೀವಿ, ಅಚನೂರ, ಬಿಲ್ಕೆರೂರ, ಬಸವನಗರ, ರಾಂಪೂರ ಗ್ರಾಮಗಳಲ್ಲಿ ಹಾಗೂ ಕದಾಂಪೂರ, ಮಲ್ಲಾಪೂರ, ಗುಂಡನ ಪಲ್ಲೆ, ಮುಗಳೊಳ್ಳಿ, ಬೆಣ್ಣೂರ, ಶಿರಗುಪ್ಪಿ, ಹಿರೇಹೊದ್ಲೂರ, ಗುಳಭಾಳ ಪುನರ್ವಸತಿ ಕೇಂದ್ರಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮತಕ್ಷೇತ್ರದ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವ ಜೊತೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಾಲೊನಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಸರ್ವರಿಗೂ ಸಮಪಾಲು, ಸಮಬಾಳು ಎಂಬ ತತ್ವದಡಿ ಕಾರ್ಯ ನಿರ್ವಹಿ ಸುತ್ತಿರುವುದಾಗಿ ತಿಳಿಸಿದರು.
ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾ ಗಿನಿಂದ ಗ್ರಾಮೀಣ ಪ್ರದೇಶಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕರು ತಿಳಿಸಿದರು.
ಎಪಿಎಂಸಿ ಅಧ್ಯಕ್ಷ ಪ್ರಭುಸ್ವಾಮಿ ಸರಗಣಾಚಾರಿ, ಬಿಜೆಪಿ ಗ್ರಾಮೀಣ ಅಧ್ಯಕ್ಷ ಶಿವು ಕನ್ನೂರ, ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಠ, ಅರುಣ ಲೋಕಾಪುರ, ಸಂಗಮೇಶ ಗುಡ್ಡದ ಮತ್ತಿತರರು ಇದ್ದರು.