ಮಂಗಳೂರು: ಸೇವೆ, ಸಾಲ ನೀಡಿಕೆ ಹಾಗೂ ವಿಶಿಷ್ಟ ಯೋಜನೆಗಳ ಮೂಲಕ ಮುಂಚೂಣಿ ಸಹಕಾರ ಬ್ಯಾಂಕ್ ಎಂದು ಹೆಸರು ಪಡೆದಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ `ಬ್ಯಾಂಕ್ ರೂಪೇ' (್ಕ್ಠ ) ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲು ನಿರ್ಧರಿಸಿದೆ.
ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ 2012-13 ನೇ ಸಾಲಿನ ಬ್ಯಾಂಕ್ನ ವಾರ್ಷಿಕ ಪ್ರಗತಿ ಬಗ್ಗೆ ಮಾಹಿತಿ ನೀಡಿದ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಈ ಯೋಜನೆ ಬಗ್ಗೆ ತಿಳಿಸಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮಂಗಳಾ ಕಿಸಾನ್ ಕ್ರೆಡಿಟ್ ಕಾರ್ಡ್ ಖಾತೆ ಹೊಂದಿರುವ ರೈತರಿಗೆ `ಬ್ಯಾಂಕ್ ರೂಪೇ' ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ದೊರೆಯಲಿದೆ. ಇದು ನಬಾರ್ಡ್ನ ಹೆಮ್ಮೆಯ ಯೋಜನೆಯಾಗಿದ್ದು, ಈ ಯೋಜನೆ ಕಾರ್ಯಗತಗೊಳಿಸುವ ರಾಷ್ಟ್ರದ ಮೊದಲ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಎಂಬ ಕೀರ್ತಿಗೆ ಪಾತ್ರವಾಗಲಿದೆ ಎಂದರು.
`ಸ್ವೈಪ್' ಮಾಡಿ ಹಣ ಪಾವತಿ
ಈ ಕಾರ್ಡ್ ಹೊಂದಿರುವ ರೈತರು ಖಾತೆಯನ್ನು ಹೊಂದಿರುವ ಸಂಘಗಳಲ್ಲಿ ಮತ್ತು ಈ ವ್ಯವಸ್ಥೆಯನ್ನು ಹೊಂದಿದ ಜಿಲ್ಲೆಯ ಯಾವುದೇ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳಲ್ಲಿ ಬ್ಯಾಂಕಿಂಗ್ ವ್ಯವಹಾರವನ್ನು ನಡೆಸಬಹುದು. ದೇಶದಾದ್ಯಂತ ಎನ್ಎಫ್ಎಸ್ (ನ್ಯಾಷನಲ್ ಫೈನಾನ್ಸಿಯಲ್ ಸ್ಪೀಚ್) ನೆಟ್ವರ್ಕ್ ಹೊಂದಿರುವ ಯಾವುದೇ ಬ್ಯಾಂಕಿನ ಎಟಿಎಂಗಳಲ್ಲಿ ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಎಲ್ಲ ಶಾಖೆಗಳಲ್ಲಿ ಮತ್ತು ಎಟಿಎಂಗಳಲ್ಲಿ ಹಣ ನಗದೀಕರಿಸಬಹುದು.
ಈ ಕಾರ್ಡ್ ಹೊಂದಿರುವ ಗ್ರಾಹಕರು ದೇಶದ ಯಾವುದೇ ವಾಣಿಜ್ಯ ಮಳಿಗೆಗಳಲ್ಲಿ ಖರೀದಿಸಿದ ವಸ್ತುಗಳಿಗೆ ನಗದು ನೀಡುವ ಬದಲು `ರೂಪೇ' ಕಾರ್ಡ್ ಅನ್ನು ಪಾಯಿಂಟ್ ಆಫ್ ಸೇಲ್ ಮೂಲಕ `ಸ್ವೈಪ್' ಮಾಡಿ ಹಣ ಪಾವತಿಸಬಹುದು.