ಹೈದರಾಬಾದ್: ಅಕ್ರಮ ಗಣಿಗಾರಿಕೆ ಹಗರಣದಲ್ಲಿ ಸಿಲುಕಿ ಚಂಚಲಗುಡಾ ಕೇಂದ್ರ ಕಾರಾಗೃಹದಲ್ಲಿರುವ ಗಾಳಿ ಜನಾರ್ದನ ರೆಡ್ಡಿ ಮತ್ತು ಅವರ ಭಾವ ಶ್ರೀನಿವಾಸ ರೆಡ್ಡಿ ದಿನದ ಹೆಚ್ಚಿನ ಸಮಯವನ್ನು ದೇವರ ಪ್ರಾರ್ಥನೆಯಲ್ಲಿ ಕಳೆಯುತ್ತಿದ್ದರೂ ಜಾಮೀನಿನ ಮೇಲೆ ಹೊರಗೆ ಬರುವ ಅವರ ಪ್ರಯತ್ನ ಫಲಿಸಲಿಲ್ಲ.
ಆಂಧ್ರಪ್ರದೇಶ ಹೈಕೋರ್ಟ್ ಸೋಮವಾರ ಇಬ್ಬರ ಜಾಮೀನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 14ಕ್ಕೆ ಮುಂದೂಡಿದೆ.ರೆಡ್ಡಿ ಜೈಲಿನಲ್ಲಿರುವ ಶಿವ ದೇವಸ್ಥಾನದಲ್ಲಿ ಪ್ರಾರ್ಥನೆ ಮತ್ತು ಧಾರ್ಮಿಕ ಪುಸ್ತಕಗಳನ್ನು ಓದುತ್ತ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ.
ಸೋಮವಾರ ಮಾಸ ಶಿವರಾತ್ರಿಯಾಗಿರುವುದರಿಂದ ರುದ್ರಾಭಿಶೇಕ ಮಾಡಲು ಅನುಮತಿ ನೀಡಬೇಕೆಂದು ಮಾಡಿದ್ದ ಮನವಿಯನ್ನು ಜೈಲಿನ ಅಧಿಕಾರಿಗಳು ತಿರಸ್ಕರಿಸಿದ್ದಾರೆ.ತಮ್ಮ ಕಕ್ಷಿದಾರರ ವಿರುದ್ಧ ಅಕ್ರಮ ಗಣಿಗಾರಿಕೆಯ ಸುಳ್ಳು ಪ್ರಕರಣವನ್ನು ದಾಖಲು ಮಾಡಲಾಗಿದೆ.
ಯಾವುದೆ ಸಾಕ್ಷಾಧಾರಗಳು ಇಲ್ಲದಿದ್ದರೂ ಬಂಧಿಸಲಾಗಿದೆ. ಆದ್ದರಿಂದ ಪ್ರಕರಣವನ್ನು ರದ್ದುಪಡಿಸಬೇಕು ಮತ್ತು ಜಾಮೀನ ಮೇಲೆ ಬಿಡುಗಡೆ ಮಾಡಬೇಕು ಎಂದು ರೆಡ್ಡಿದ್ವಯರ ವಕೀಲ ರಾಘವಾಚಾರ್ಯ ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಈ ಮಧ್ಯೆ ಜನಾರ್ದನ ರೆಡ್ಡಿ ಅವರ ನಿಕಟವರ್ತಿ ಖಾರಾಪುಡಿ ಮಹೇಶ್ ಇಲ್ಲಿಯ ಸಿಬಿಐ ಪ್ರಾದೇಶಿಕ ಕಚೇರಿಯಲ್ಲಿ ಅಧಿಕಾರಿಗಳ ಎದುರು ಹಾಜರಾಗಿ ವಿಚಾರಣೆ ಎದುರಿಸಿದರು.