ಚಾಮರಾಜನಗರ: `ಜಿಲ್ಲೆಯಲ್ಲಿ ರೇಷ್ಮೆ ಕೃಷಿಯ ಪುನಶ್ಚೇತನ ಸಂಬಂಧ ರೈತರಿಗೆ ತಾಂತ್ರಿಕತೆ ಬಗ್ಗೆ ಹೆಚ್ಚು ಅರಿವು ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳ ಬೇಕಿದೆ~ ಎಂದು ಜಿ.ಪಂ. ಸದಸ್ಯೆ ಜಿ.ಎಸ್. ನಿತ್ಯಾ ಒತ್ತಾಯಿಸಿದರು.
ತಾಲ್ಲೂಕಿನ ನಾಗವಳ್ಳಿಯ ಬಸವೇಶ್ವರ ದೇವಸ್ಥಾ ನದ ಆವರಣದಲ್ಲಿ ರೇಷ್ಮೆ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿ ಗುರುವಾರ ಹಮ್ಮಿಕೊಂಡಿದ್ದ ರೇಷ್ಮೆ ಬೆಳೆ ಕ್ಷೇತ್ರೋತ್ಸವ ಉದ್ಘಾಟಿಸಿ ಮಾತನಾಡಿದರು.
ಕೋಲಾರ, ಮಂಡ್ಯ ಜಿಲ್ಲೆಯ ರೈತರು ಹೆಚ್ಚಾಗಿ ರೇಷ್ಮೆ ಬೆಳೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದಾರೆ. ರೇಷ್ಮೆ ಉದ್ಯಮಕ್ಕೆ ಹೆಸರುವಾಸಿಯಾಗಿದ್ದ ಗಡಿ ಜಿಲ್ಲೆಯಲ್ಲಿ ಗಣನೀಯವಾಗಿ ಈ ಕೃಷಿ ಕಡಿಮೆಯಾಗುತ್ತಿದೆ. ರೇಷ್ಮೆ ಬೆಳೆಗೆ ಪುನಶ್ಚೇತನ ನೀಡಲು ಸರ್ಕಾರ ಕಾರ್ಯಕ್ರಮ ರೂಪಿಸಬೇಕಿದೆ. ಪ್ರಸ್ತುತ ಜಾರಿಗೊಂಡಿರುವ ತಾಂತ್ರಿಕ ಕಾರ್ಯಕ್ರಮಗಳ ಪ್ರಯೋಜನ ಪಡೆಯಲು ರೈತರು ಮುಂದಾಗಬೇಕು ಎಂದು ಕರೆ ನೀಡಿದರು.
ರೇಷ್ಮೆ ಇಲಾಖೆಯ ವಿಜ್ಞಾನಿಗಳು ಹೊಸದಾಗಿ ಅನುಷ್ಠಾನಕ್ಕೆ ತಂದಿರುವ ಆಧುನಿಕ ತಾಂತ್ರಿಕ ಪದ್ಧತಿ ಅಳವಡಿಸಿಕೊಂಡು ರೈತರು ರೇಷ್ಮೆ ಬೆಳೆಯುವುದು ಉತ್ತಮ. ಇದರಿಂದ ಹೆಚ್ಚಿನ ಆದಾಯ ಕೂಡ ಪಡೆಯಬಹುದು ಎಂದರು.
ಇದೇ ವೇಳೆ ಜಿ.ಪಂ.ನಿಂದ ರೇಷ್ಮೆ ಬೆಳೆಗಾರರಿಗೆ ಉಚಿತವಾಗಿ ಸೋಂಕು ನಿವಾರಕ ವಿತರಿಸಲಾಯಿತು. ಗ್ರಾ.ಪಂ. ಅಧ್ಯಕ್ಷೆ ಪುಟ್ಟನಂಜಮ್ಮ ಅಧ್ಯಕ್ಷತೆವಹಿಸಿದ್ದರು. ತಾ.ಪಂ. ಸದಸ್ಯೆ ಲಲಿತಾ, ಜಿಲ್ಲಾ ರೇಷ್ಮೆ ಇಲಾಖೆ ಉಪ ನಿರ್ದೇಶಕ ಕೆ.ಎಚ್. ಪೃಥ್ವಿರಾಜ್, ಪ್ರಾದೇಶಿಕ ರೇಷ್ಮೆ ಸಂಶೋಧನಾ ಕೇಂದ್ರದ ಜಂಟಿ ನಿರ್ದೇಶಕ ಡಾ.ಡಿ.ಎಸ್. ಚಂದ್ರಶೇಖರ್, ವಿಜ್ಞಾನಿಗಳಾದ ಮಲ್ಲಿಕಾರ್ಜುನಸ್ವಾಮಿ, ಗುರುರಾಜು, ಸಹಾಯಕ ನಿರ್ದೇಶಕ ಎಸ್. ಮಹದೇವಯ್ಯ, ವಿಸ್ತರಣಾಧಿಕಾರಿ ಎಂ. ರೇಣುಕೇಶ್, ವಲಯಾಧಿಕಾರಿ ಪರಶಿವಮೂರ್ತಿ ಇತರರು ಹಾಜರಿದ್ದರು.