ಬೆಂಗಳೂರು: ರೇಷ್ಮೆಗೆ ಗೂಡಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವ ಕುರಿತು ಕೇಂದ್ರ ಸರ್ಕಾರವೇ ನಿರ್ಧಾರ ತೆಗೆದುಕೊಳ್ಳಬೇಕು ಎಂದು ರೇಷ್ಮೆ ಸಚಿವ ಬಿ.ಎನ್.ಬಚ್ಚೇಗೌಡ ಸೋಮವಾರ ವಿಧಾನಸಭೆಯಲ್ಲಿ ತಿಳಿಸಿದರು.
ಕಾಂಗ್ರೆಸ್ನ ಅಮರೇಶ್ ಪ್ರಶ್ನೆಗೆ ಉತ್ತರಿಸಿದ ಅವರು, ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವಂತೆ ಹಾಗೂ ಆವರ್ತ ನಿಧಿಗೆ ಹಣ ನೀಡುವಂತೆ ಈಗಾಗಲೇ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ. ಈ ಬಾರಿಯ ಬಜೆಟ್ನಲ್ಲಿ ನೆರವು ನೀಡುವ ನಿರೀಕ್ಷೆ ಇದೆ ಎಂದರು.
ಆಮದು ಶುಲ್ಕವನ್ನು ಶೇ 5ಕ್ಕೆ ಇಳಿಸಿದ ಪರಿಣಾಮ ರೇಷ್ಮೆಗೂಡಿನ ದರ ಕುಸಿದಿದೆ. ಹನಿ ನೀರಾವರಿಗೆ ಸಬ್ಸಿಡಿ, ರೇಷ್ಮೆ ಹುಳು ಮನೆ ನಿರ್ಮಾಣಕ್ಕೆ ಸಾಲ ಸೇರಿದಂತೆ ರೇಷ್ಮೆ ಕೃಷಿ ಚಟುವಟಿಕೆಗಳಿಗೆ 42 ಕೋಟಿ ರೂಪಾಯಿ ಸಹಾಯಧನ ನೀಡಲಾಗಿದೆ. ಶೇ 3ರ ಬಡ್ಡಿದರದಲ್ಲಿ ಸಾಲ ನೀಡುವ ಪದ್ಧತಿಯೂ ಜಾರಿಯಲ್ಲಿದೆ ಎಂದು ಬಿ. ಎನ್.ಬಚ್ಚೇಗೌಡ ಹೇಳಿದರು.