ಕೋಲಾರ: ರೇಷ್ಮೆ ಬೆಳೆಗಾರರು ಮತ್ತು ರೀಲರುಗಳ ಬೇಡಿಕೆ ಈಡೇರಿಸಬೇಕು ಎಂದು ಪ್ರಧಾನಮಂತ್ರಿಯನ್ನು ಆಗ್ರಹಿಸಿ ಅಂಚೆ ಪತ್ರ ಚಳವಳಿಗೆ ನಗರದ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆ ಆವರಣದಲ್ಲಿ ಮಂಗಳವಾರ ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಚಾಲನೆ ನೀಡಿದರು.
ಪ್ರಧಾನಿಗೆ ಬರೆದ ಪತ್ರಕ್ಕೆ ಸಹಿ ಹಾಕುವ ಮೂಲಕ ಅವರು ಚಾಲನೆ ನೀಡಿದ ಬಳಿಕ ಹಾಜರಿದ್ದ ಇನ್ನಿತರ ರೈತರು ಚಳವಳಿಯಲ್ಲಿ ಪಾಲ್ಗೊಂಡರು.
ರೇಷ್ಮೆ ಬೆಳೆಗಾರರು ಮತ್ತು ರೀಲರುಗಳ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ 1 ಲಕ್ಷ ಅಂಚೆ ಪತ್ರಗಳನ್ನು ಪ್ರಧಾನಮಂತ್ರಿಗೆ ಕಳಿಸುವ ಉದ್ದೇಶವಿದೆ. ಈ ನಿಟ್ಟಿನಲ್ಲಿ ಚಳವಳಿಗೆ ಜಿಲ್ಲೆಯಲ್ಲಿ ಚಾಲನೆ ನೀಡಲಾಗುತ್ತಿದೆ ಎಂದು ಮುಖಂಡ ಜಿ.ಸಿ.ಬೈಯ್ಯಾರೆಡ್ಡಿ ಹೇಳಿದರು.
ರೇಷ್ಮೆ ಮೇಲಿನ ಆಮದು ಸುಂಕವನ್ನು ಮೊದಲಿನಂತೆ ಶೇ. 30ರಷ್ಟು ಹೆಚ್ಚಿಸಬೇಕು. ರೇಷ್ಮೆ ಉತ್ಪಾದನೆ ವೆಚ್ಚ 350 ರೂಪಾಯಿ ನೀಡಬೇಕು. ಅದನ್ನು ಆಧರಿಸಿಯೇ ಕನಿಷ್ಠ ಬೆಂಬಲ ಬೆಲೆ ನೀಡಬೇಕು ಮತ್ತು ರೈತರಿಗೆ ಆಗಿರುವ ನಷ್ಟ ತುಂಬಿಕೊಡಬೇಕು ಎಂಬುದು ಪ್ರಮುಖ ಬೇಡಿಕೆ ಎಂದು ತಿಳಿಸಿದರು.