ಪಾವಗಡ: ಕೇಂದ್ರ ಮತ್ತು ರಾಜ್ಯ ಸರ್ಕಾರ ರೇಷ್ಮೆ ಬೆಳೆಗಾರರಿಗೆ ಅನೇಕ ಯೋಜನೆಗಳನ್ನು ರೂಪಿಸಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ತಾಳೆಮರದಳ್ಳಿ ನರಸಿಂಹಯ್ಯ ಸಲಹೆ ನೀಡಿದರು.
ತಾಲ್ಲೂಕಿನ ಸಾಸಲು ಕುಂಟೆ ಗ್ರಾಮದಲ್ಲಿ ಶನಿವಾರ ರೇಷ್ಮೆ ಬೆಳೆ ಕುರಿತ ವಿಚಾರ ಸಂಕಿರಣದಲ್ಲಿ ಕ್ಲಸ್ಟರ್ ಯೋಜನಡೆಯಡಿ ರೈತರಿಗೆ ಉಪಕರಣಗಳನ್ನು ವಿತರಿಸಿ ಮಾತನಾಡಿದರು.
ರೇಷ್ಮೆಗೂಡು ಬೆಳೆಯುವವರಿಗೆ ಉತ್ತಮ ತಾಂತ್ರಿಕ ಸೇವೆ ಹಾಗೂ ಸೌಲಭ್ಯ ನೀಡಲಾಗುತ್ತಿದೆ. ಗೂಡಿಗೆ ಉತ್ತಮ ಬೆಲೆ ಹಾಗೂ ಸಹಾಯಧನ ಕೂಡ ಸಿಗುತ್ತಿದೆ ಎಂದರು.
ಸರ್ಕಾರ ನೀಡುವ ಸವಲತ್ತುಗಳನ್ನು ರೈತರು ಪಡೆದು ರೇಷ್ಮೆ ಬೆಳೆಗೆ ಮುಂದಾಗಬೇಕು ಎಂದು ಅವರು ಮನವಿ ಮಾಡಿದರು.
ಬೆಂಗಳೂರಿನ ರೇಷ್ಮೆ ಬಿತ್ತನೆ ಕೋಠಿಯ ವಿಜ್ಞಾನಿ ಮಂಜುಳಾ, ಕೊಡತಿಯ ಪ್ರಾದೇಶಿಕ ರೇಷ್ಮೆಸಂಶೋಧನಾ ಸಂಸ್ಥೆ ಡಾ. ಜೈಶಂಕರ್, ಜಿಲ್ಲಾ ರೇಷ್ಮೆ ಅಧಿಕಾರಿ ಪುಟ್ಟಲಿಂಗಯ್ಯ ಮಾತನಾಡಿದರು.
ಕೇಂದ್ರ ರೇಷ್ಮೆ ಮಂಡಳಿ ವಿಜ್ಞಾನಿಗಳಾದ ಡಾ.ಗಂಗಾಧರ್. ಡಾ.ನರಸಿಂಹನಾಯಕ್. ಡಾ. ಹೇಮಂತ್, ಸುರೇಶ್ಬಾಬು ರೇಷ್ಮೆ ಬೆಳೆಯ ತಾಂತ್ರಿಕತೆ ಕುರಿತು ವಿವರ ನೀಡಿದರು. ರೇಷ್ಮೆ ಸಹಾಯಕ ನಿರ್ದೇಶಕ ಮುನ್ಷಿಬಸಯ್ಯ ಸ್ವಾಗತಿಸಿದರು. ಶಿವಶಂಕರ್ ವಂದಿಸಿದರು.