ಬೆಂಗಳೂರು: `ಕೇಂದ್ರ ಸರ್ಕಾರ ರೇಷ್ಮೆ ಮೇಲಿನ ಆಮದು ಸುಂಕವನ್ನು ಶೇಕಡಾ 31 ರಿಂದ 51ಕ್ಕೆ ಏರಿಸಬೇಕು~ ಎಂದು ಸುಂಕರಹಿತ ರೇಷ್ಮೆ ಆಮದು ವಿರೋಧಿ ಅಖಿಲ ಭಾರತ ಹೋರಾಟ ಸಮಿತಿಯ ಸಂಘಟನಾ ಸಂಚಾಲಕ ಜಿ.ಸಿ. ಬಯ್ಯಾರೆಡ್ಡಿ ಒತ್ತಾಯಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ರೇಷ್ಮೆ ಮೇಲಿನ ಆಮದು ಸುಂಕದ ಹೆಚ್ಚಳ ಹಾಗೂ ದೇಸಿ ರೇಷ್ಮೆ ಬೆಳೆಗಾರರ ರಕ್ಷಣೆಯ ಬಗ್ಗೆ ಸರ್ಕಾರಕ್ಕೆ ಮನವಿ ಮಾಡುತ್ತಲೇ ಇದ್ದೇವೆ. ಆದರೆ ಕೇಂದ್ರ ಸರ್ಕಾರ ಮಾತ್ರ ಈ ವಿಚಾರದಲ್ಲಿ ಮೌನವೇ ಉತ್ತರ ಎಂಬಂತೆ ವರ್ತಿಸುತ್ತಿದೆ. ರೇಷ್ಮೆ ಮೇಲಿನ ಆಮದು ಸುಂಕದ ಹೆಚ್ಚಳ ಸೇರಿದಂತೆ ದೇಸೀ ರೇಷ್ಮೆ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಬೇಕು~ ಎಂದು ಅವರು ಒತ್ತಾಯಿಸಿದರು.
`ರೇಷ್ಮೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಸಂಸದರೂ ಜವಾಬಾರಿಯುತವಾಗಿ ವರ್ತಿಸುತ್ತಿಲ್ಲ. ದೇಶದ ಕೃಷಿಕರ ಹಿತಕಾಯುವ ಬಗ್ಗೆ ಜನಪ್ರತಿನಿಧಿಗಳಿಗೆ ಎಳ್ಳಷ್ಟೂ ಕಾಳಜಿ ಇಲ್ಲ~ ಎಂದು ಅವರು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಬೆಂಗಳೂರು ನಗರ ಸಂಚಾಲಕ ಚಂದ್ರಾರೆಡ್ಡಿ, ರೈತ ಸಂಘದ ಮುಖಂಡ ಮಾರುತಿ ಮಾನ್ಪಡೆ ಮತ್ತಿತರರು ಉಪಸ್ಥಿತರಿದ್ದರು.