ಹುಳಿಯಾರು: ಅಕ್ಟೋಬರ್ 1ರಿಂದ ಬಿತ್ತನೆ ಬೀಜದ ರೇಷ್ಮೆ ಗೂಡಿಗೆ ಪ್ರತಿ ಕೆ.ಜಿ.ಗೆ ರೂ. 600 ನಿಗದಿಪಡಿಸಲಾಗಿದೆ ಎಂದು ತಾಲ್ಲೂಕು ರೇಷ್ಮೆ ಸಹಾಯಕ ನಿರ್ದೇಶಕ ಎಚ್.ಆಂಜನೇಯ ತಿಳಿಸಿದರು.
ರಂಗನಕೆರೆ ಗ್ರಾಮದಲ್ಲಿ ಈಚೆಗೆ ನಡೆದ ರೇಷ್ಮೆಬೆಳೆ ಕ್ಷೇತ್ರೋತ್ಸವ, ವಿಚಾರ ಸಂಕಿರಣ ಮತ್ತು ಮಹಿಳಾ ರೈತರಿಗೆ ಹಮ್ಮಿಕೊಂಡಿದ್ದ ತರಬೇತಿಯಲ್ಲಿ ಮಾತನಾಡಿದ ಅವರು, ರೈತರು ಪ್ರಯೋಜನ ಪಡೆದು ಆರ್ಥಿಕವಾಗಿ ಸಬಲರಾಗುವಂತೆ ಸಲಹೆ ನೀಡಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಆರ್.ಪಿ.ವಸಂತಯ್ಯ ಸಮಾರಂಭ ಉದ್ಘಾಟಿಸಿದರು. ಮುಖಂಡ ವೈ.ಕೆ. ರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ರೇಷ್ಮೆ ವಿಸ್ತರಣಾಧಿಕಾರಿ ಜುಂಜಯ್ಯ ಇಲಾಖೆಯಿಂದ ದೊರೆಯುವ ಸವಲತ್ತು ಬಗ್ಗೆ ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಗುಂಡಯ್ಯ, ಲಕ್ಷ್ಮೀದೇವಿ, ಗೀತಾ ಇದ್ದರು. ರೇಷ್ಮೆ ನಿರೀಕ್ಷಕ ರಾಜಣ್ಣ ಸ್ವಾಗತಿಸಿ, ರೇಷ್ಮೆ ವಲಯಾಧಿಕಾರಿ ಬಿ.ಶರಣಪ್ಪ ವಂದಿಸಿದರು.