ಚಿತ್ರದುರ್ಗ: ರೈತ ಸಂಘದ ಬಣಗಳ ವಿಲೀನಕ್ಕೂ ಸುರೇಶ್ಬಾಬು ರಾಜ್ಯಾಧ್ಯಕ್ಷರಾಗಿರುವ ಹಾಗೂ ಕೆ.ಟಿ. ಗಂಗಾಧರ್ ಕಾರ್ಯಾಧ್ಯಕ್ಷರಾಗಿರುವ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ `ಚುನಾವಣೇತರ~ ಸಂಘಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮತ್ತು ರಾಜ್ಯ ಉಪಾಧ್ಯಕ್ಷ ಬಾಗೇನಹಾಳ್ ಕೊಟ್ರಬಸಪ್ಪ ತಿಳಿಸಿದ್ದಾರೆ.
ಶಿವಮೂರ್ತಿ ಮುರುಘಾ ಶರಣರು ರೈತ ಸಂಘದ ಎಲ್ಲ ಬಣಗಳನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಕೈ ಹಾಕಿದ್ದರು. ಮುರುಘಾ ಮಠದಲ್ಲಿ ಎಲ್ಲ ಬಣಗಳ ಮುಖಂಡರಿಗೆ ಭಿನ್ನಾಭಿಪ್ರಾಯ ಚರ್ಚಿಸಲು ಆಹ್ವಾನ ನೀಡಿದಾಗ ರಾಜ್ಯಾಧ್ಯಕ್ಷ ಸುರೇಶ್ಬಾಬು ಹಾಗೂ ಕಾರ್ಯಾಧ್ಯಕ್ಷರಾದ ಗಂಗಾಧರ್ ಅವರ ನೇತೃತ್ವದಲ್ಲಿ ಸಭೆಯಲ್ಲಿ ಭಾಗವಹಿಸಿ ಚುನಾವಣೇತರವಾಗಿ ಸಂಘಟಿಸಲು ಅಭಿಪ್ರಾಯಗಳನ್ನು ಮುಕ್ತವಾಗಿ ಪಡೆಯಲಾಗಿತ್ತು.
ಈ ಬಗ್ಗೆ 2-3 ಬಾರಿ ಸಭೆ ಕರೆದು ಚರ್ಚಿಸಲಾಗಿತ್ತು. ಆದರೆ, ಫೆ. 23ರಂದು ಮುರುಘಾ ಮಠದಲ್ಲಿ ಕರೆದಿದ್ದ ಸಭೆಗೆ ಸುರೇಶ್ಬಾಬು ಹಾಗೂ ಗಂಗಾಧರ್ ನೇತೃತ್ವದ `ಚುನಾವಣೇತರ~ ಸಂಘಟನೆಗೆ ಯಾವುದೇ ಆಹ್ವಾನ ನೀಡಿರಲಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಘದ ವಿಲೀನದ ಬಗ್ಗೆ ರಾಜ್ಯದ ಮುಖಂಡರನ್ನು ಸಂಪರ್ಕ ಮಾಡಿಲ್ಲ. ಮಾಧ್ಯಮಗಳ ಮೂಲಕ ಈ ವಿಷಯ ತಿಳಿಯಿತು. ಆದ್ದರಿಂದ, ಮುರುಘಾ ಶರಣರ ಸಮ್ಮುಖ ವಿಲೀನವಾದ ಸಂಘಟನೆಗೂ ತಮಗೂ ಸಂಬಂಧವಿಲ್ಲ ಎಂದರು.