ಹಳೇಬೀಡು: 1980ರ ದಶಕದಲ್ಲಿ ಪ್ರತಿಗ್ರಾಮದಲ್ಲಿಯೂ ಸಂಘಟನೆಯಾಗಿದ್ದ ರೈತಸಂಘವನ್ನು ಮತ್ತೊಮ್ಮೆ ಗ್ರಾಮಮಟ್ಟದಲ್ಲಿ ಅಸ್ತಿತ್ವಕ್ಕೆ ತರುವ ಉದ್ದೇಶದಿಂದ ಹೋಬಳಿ ಕೇಂದ್ರದಲ್ಲಿ ಕಚೇರಿ ಆರಂಭಿಸಲಾಗಿದೆ. ರೈತರು ಸಂಘದ ಸದಸ್ಯತ್ವ ಪಡೆಯುವುದಲ್ಲದೆ, ಕಚೇರಿಯಲ್ಲಿ ತಮ್ಮ ಸಮಸ್ಯೆಗೆ ಸಲಹೆ ಸಹಕಾರ ಪಡೆಯಬಹುದು ಎಂದು ಹೋಬಳಿ ರೈತಸಂಘ ಅಧ್ಯಕ್ಷ ಮಾಯಗೊಂಡನಹಳ್ಳಿ ಚನ್ನೇಗೌಡ ಹೇಳಿದರು.
ಪಟ್ಟಣದ ಸೆಸ್ಕ್ ಕಚೇರಿ ಮುಂಭಾಗದ ಕಟ್ಟಡದಲ್ಲಿ ಬುಧವಾರ ನಡೆದ ರೈತಸಂಘದ ಹೊಬಳಿ ಘಟಕದ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಳೇಬೀಡು, ಮಾದಿಹಳ್ಳಿ ಹೋಬಳಿಗಳು ಶಾಶ್ವತ ನೀರಾವರಿ ಯೋಜನೆಯಿಂದ ವಂಚಿತವಾಗಿವೆ. ಸರ್ಕಾರ ಯಗಚಿ ಅಣೆಕಟ್ಟೆಯ ನಾಲೆಯಿಂದ ಏತ ನೀರಾವರಿ ಯೋಜನೆ ಕೈಗೊಂಡಿದೆ. ವಿದ್ಯುತ್ ಸಮಸ್ಯೆ ಹಾಗೂ ಯಂತ್ರೋಪಕರಣ ಸವಕಳಿಯಾದಾಗ ಯೋಜನೆ ಸ್ಥಗಿತವಾಗುವ ಸಾಧ್ಯತೆ ಇರುತ್ತದೆ.
ಹೊಯ್ಸಳರ ಕಾಲದ ರಾಜ ಕಾಲುವೆಯಲ್ಲಿ ನೀರುಹರಿಸಿದರೆ ಕಡಿಮೆ ವೆಚ್ಚದಲ್ಲಿ ಕಾಮಗಾರಿ ನಿರ್ವಹಿಸಬಹುದು. ಹಳೆಯ ಕಾಲದ ಸಂಸ್ಕೃತಿಯನ್ನು ಉಳಿಸಿದಂತಾಗುತ್ತದೆ. ಎರಡೂ ಹೋಬಳಿಯ ರೈತರು ರೈತಸಂಘದೊಂದಿಗೆ ಕೈಜೋಡಿಸಿ ಹೋರಾಡಲು ಮುಂದಾಗಬೇಕು ಎಂದು ಚನ್ನೇಗೌಡ ಹೇಳಿದರು.
ರೈತಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಪಿ.ಕುಮಾರ್ ಮಾತನಾಡಿ, ಮಳೆ ಬೆಳೆ ಇಲ್ಲದೆ ರೈತವರ್ಗ ತತ್ತರಿಸಿದೆ. ಸರ್ಕಾರಗಳು ರೈತನ ರಕ್ಷಣೆ ಮಾಡುವಲ್ಲಿ ವಿಫಲವಾಗಿವೆ. ಆಳುವವರು ಅನ್ನದಾತರನ್ನು ಉಳಿಸಿಕೊಳ್ಳದಿದ್ದರೆ ಮುಂದೆ ಆಹಾರ ಸಮಸ್ಯೆ ತಲೆದೊರಲಿದೆ ಎಂದರು.
ರೈತಸಂಘ ತಾಲ್ಲೂಕು ಉಪಾಧ್ಯಕ್ಷ ಎಲ್.ಈ.ಶಿವಪ್ಪ, ಹೋಬಳಿ ಸಂಚಾಲಕ ಗುರುಶಾಂತಪ್ಪ, ಮುಖಂಡರಾದ ಅಡಿಗೆ ರಾಜು, ಮುನ್ನಾ ಇದ್ದರು.