ಹಾರುಗೊಪ್ಪ (ಬೈಲಹೊಂಗಲ): ಜೀವನದಲ್ಲಿ ಹಣ ಗಳಿಸುವುದೇ ಶ್ರೀಮಂತಿಕೆ ಅಲ್ಲ, ಹಸಿದ ಹೊಟ್ಟೆಗೆ ಅನ್ನ, ನೀರು ಕೊಡುವ ರೈತನು ನಿಜವಾದ ಶ್ರೀಮಂತ ಎಂದು ವಿಜಾಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಸಿದ್ಧಾರೂಢ ಆಶ್ರಮ ಉದ್ಘಾಟನೆ ಹಾಗೂ ನೂತನ ಅಮೃತಶಿಲಾ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿ ಅವರು ಮಾತನಾಡಿದರು.
`ಶ್ರೀಮಂತಿಕೆ ಹಸಿದ ಹೊಟ್ಟೆಯನ್ನು ತುಂಬಿಸುವುದಿಲ್ಲ. ರೈತ ಎಲ್ಲ ಜನರಿಗಾಗಿ ಕೃಷಿ ಮಾಡಿ ಅನ್ನ ನೀಡುವನು. ಹೀಗಿರುವಾಗ ಬಡವ, ಶ್ರೀಮಂತ ಎನ್ನದೇ ಎಲ್ಲರೂ ಒಂದೇ ಎನ್ನುವ ಮನೋಭಾವನೆ ಬೆಳೆಸಿಕೊಂಡು ಸಾರ್ಥಕ ಜೀವನ ನಡೆಬೇಕು~ ಎಂದರು.
ಬೆಳಗಾವಿ-ನಾಗನೂರ ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನೇತೃತ್ವವನ್ನು ಅರಭಾಂವಿ ದುರದುಂಡೀಶ್ವರಮಠ ಸಿದ್ಧಲಿಂಗ ಸ್ವಾಮೀಜಿ, ಅಧ್ಯಕ್ಷತೆಯನ್ನು ಮುಗಳಖೋಡ ಷಡಕ್ಷರಿ ಮುರುಘರಾಜೇಂದ್ರ ಸ್ವಾಮೀಜಿ ವಹಿಸಿದ್ದರು.
ಕಾಡಸಿದ್ದೇಶ್ವರ ಸ್ವಾಮೀಜಿ, ಮಲ್ಲಯ್ಯ ಸ್ವಾಮೀಜಿ, ಮಹಾದೇವ ಸರಸ್ವತಿ ಸ್ವಾಮೀಜಿ, ಚಿದಾನಂದ ಸ್ವಾಮೀಜಿ, ಸುರೇಶ ಮಹಾರಾಜ ಸ್ವಾಮೀಜಿ, ಪ್ರಭುದೇವ ಸ್ವಾಮೀಜಿ, ಸದಾಶಿವಾನಂದ ಸ್ವಾಮೀಜಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಸಂಸದ ಸುರೇಶ ಅಂಗಡಿ, ಶಾಸಕ ಜಗದೀಶ ಮೆಟಗುಡ್ಡ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕೌಜಲಗಿ, ಸವದತ್ತಿ ಎ.ಪಿ.ಎಂ.ಸಿ. ಅಧ್ಯಕ್ಷ ಬಸಯ್ಯಸ್ವಾಮಿ ಹಿರೇಮಠ, ಶ್ರೀ ನೀಲಕಂಠೇಶ್ವರ ವಿದ್ಯಾ ವರ್ಧಕ ಸಂಸ್ಥೆಯ ಕಾರ್ಯಾಧ್ಯಕ್ಷ ಚಂದ್ರಶೇಖರ ಸಾಧುನವರ, ರಾಜೇಂದ್ರ ದೇಸಾಯಿ, ಸದಾನಂದ ಅಳಾಜ ಆಗಮಿಸಿದ್ದರು. ಸಿದ್ಧಾರೂಢಮಠ ಬಸವಾನಂದ ಸ್ವಾಮೀಜಿ ನೀಡಿದ ಬೆಳ್ಳಿ ಕಿರೀಟವನ್ನು ಸಿದ್ದೇಶ್ವರ ಶ್ರೀಗಳು ಶಿಲಾಮೂರ್ತಿಗೆ ಧಾರಣ ಮಾಡಿದರು. ವಿವಿಧ ಗಣ್ಯರನ್ನು ಸತ್ಕರಿಸಲಾಯಿತು.