ಮದ್ದೂರು: ರೈತರು ಮತ್ತು ಕೃಷಿ ಕೂಲಿ ಕಾರ್ಮಿಕರ ಬದುಕು ಸುಧಾರಿಸುವ ಬಜೆಟ್ ಮಂಡನೆಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕು ಎಂದು ಕೋರಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರಿಗೆ ರೈತ ಮತ್ತು ಕೃಷಿ ಕಾರ್ಮಿಕರ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ಅಹವಾಲು ಸಲ್ಲಿಸಿದರು.
ಬೆಂಗಳೂರಿನ ಅವರ ನಿವಾಸಕ್ಕೆ ಭಾನುವಾರ ಭೇಟಿ ನೀಡಿದ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ದೇಶಹಳ್ಳಿ ಆರ್.ಮೋಹನಕುಮಾರ್ ಹಾಗೂ ತಾಲ್ಲೂಕು ಸಮಿತಿ ಅಧ್ಯಕ್ಷ ತೂಬಿನಕೆರೆ ಟಿ.ಲಿಂಗಯ್ಯ ಇತರ ಪದಾಧಿಕಾರಿಗಳು ಎಸ್.ಎಂ.ಕೃಷ್ಣ ಅವರನ್ನು ಅಭಿನಂದಿಸಿದರು.
ನಂತರ ರೈತರು ಹಾಗೂ ಕೃಷಿ ಕಾರ್ಮಿಕರ ಕಲ್ಯಾಣಕ್ಕೆ ಅಗತ್ಯವಾದ 20ಕ್ಕೂ ಹೆಚ್ಚು ಅಂಶಗಳನ್ನು ಒಳಗೊಂಡ ಮನವಿ ಸಲ್ಲಿಸಿ, ಮನವಿಯಲ್ಲಿನ ಅಂಶಗಳನ್ನು ಬಜೆಟ್ ಪೂರ್ವ ಸಭೆಯಲ್ಲಿ ಚರ್ಚಿಸಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಬೇಕು ಎಂದು ವಿನಂತಿಸಿದರು.
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಸಮಿತಿಯ ಪದಾಧಿಕಾರಿಗಳಾದ ಸಿದ್ದರಾಮು, ಕೃಷ್ಣಪ್ಪ, ರಮೇಶ್, ಬೋರಪುರ ಮ್ಯಾಥ್ಯೂ, ಮಹದೇವು ಸೇರಿದಂತೆ ಹಲವರು ಉಪಸ್ಥಿತರಿದ್ದರು.
`ವಿವೇಕಾನಂದರ ಆದರ್ಶ ಪಾಲಿಸಿ~
ಶ್ರೀರಂಗಪಟ್ಟಣ: ಸ್ವಾಮಿ ವಿವೇಕಾನಂದರ ಆದರ್ಶವನ್ನು ಯುವ ಜನರು ಪಾಲಿಸಬೇಕು ಎಂದು ಮೈಸೂರಿನ ವಿವೇಕಾನಂದ ಯೂತ್ ಮೂವ್ಮೆಂಟ್ ಅಧ್ಯಕ್ಷ ಡಾ.ಆರ್.ಬಾಲಸುಬ್ರಹ್ಮಣ್ಯಂ ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಶನಿವಾರ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ 150ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿವೇಕಾನಂದರ 150ನೇ ಜಯಂತಿ ಆಚರಣೆಗೆ ಕೇಂದ್ರ ಸರ್ಕಾರ ರೂ.100 ಕೋಟಿ ಹಾಗೂ ರಾಜ್ಯ ಸರ್ಕಾರ ರೂ.20 ಕೋಟಿ ಹಣ ವ್ಯಯಿಸಲಿವೆ.
ಹಣ ವೆಚ್ಚ ಮಾಡಿದರೆ ವಿವೇಕಾನಂದರ ಕನಸಿನ ಭಾರತ ನಿರ್ಮಾಣವಾಗದು. ವಿವೇಕಾನಂದರ ಚಿಂತನೆಯನ್ನು ಬಿತ್ತಿ ಬೆಳೆಯಬೇಕು. ಅದಕ್ಕೆ ಪೂರಕ ಕಾರ್ಯಕ್ರಮ ರೂಪಿಸಬೇಕು ಎಂದು ಸಲಹೆ ನೀಡಿದರು.
ಡಾ.ಬಿ.ಸುಜಯಕುಮಾರ್, ಸಾಹಿತಿ ಅನಾರ್ಕಲಿ ಸಲೀಂ, ಸಮಾಜ ಕಲ್ಯಾಣ ಅಧಿಕಾರಿ ಪಿ.ಎಸ್.ಪ್ರಭಾ, ದೈಹಿಕ ಶಿಕ್ಷಣ ಪರಿವೀಕ್ಷಕ ವೀರೇಶ್ ಲಿಂಬಿಕಾಯಿ ಮಾತನಾಡಿದರು. ವಾರ್ಡನ್ ನಾಗರಾಜು, ಯೋಗ ಶಿಕ್ಷಕ ಅಪ್ಪಾಜಿ, ಶಿವರಾಜ್ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.