ಹಾಸನ: `ರೈತರ ಆದಾಯ ಹೆಚ್ಚಿಸಿ ಅವರ ಜೀವನ ಮಟ್ಟ ಸುಧಾರಿಸುವ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ರೋಪಿಸಿದೆ' ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ನುಡಿದರು.
ಕೇಂದ್ರ ಕೃಷಿ ಸಚಿವಾಲಯದ ವತಿಯಿಂದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಸೋಮವಾರ ಸರ್ಕಾರೇತರ ಕೃಷಿ ವ್ಯಾಪಾರಾಭಿವೃದ್ಧಿ ನೆರವು ಸಂಸ್ಥೆ ಮೂಲಕ ಏರ್ಪಡಿಸಿದ್ದ ಕೃಷಿ ಉದ್ದಿಮೆ ಬಂಡವಾಳ ಸಹಾಯ ಯೋಜನೆ ಮಾಹಿತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
`ರೈತರು ವೈಯಕ್ತಿಕವಾಗಿ ಅಥವಾ ಸಂಘಸಂಸ್ಥೆಗಳ ಗುಂಪಿನ ಮೂಲಕ ಕೃಷಿಗೆ ಪೂರಕವಾದ ಉದ್ಯಮ ಪ್ರಾರಂಭಿಸಲು ಮುಂದಾದರೆ ಸರ್ಕಾರ 75 ಲಕ್ಷ ರೂಪಾಯಿ ವರೆಗೆ ಸಾಲ ಸೌಲಭ್ಯ ಒದಗಿಸುವ ಯೋಜನೆ ಜಾರಿಗೆ ತಂದಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಕೃಷಿಯ ಜೊತೆಗೆ ತೋಟಗಾರಿಕೆ, ಮೀನುಗಾರಿಕೆ, ಹೈನುಗಾರಿಕೆ, ಪುಷ್ಪೋದ್ಯಮಕ್ಕೆ ಪ್ರೋತ್ಸಾಹ ನೀಡುವುದು ಹಾಗೂ ಉತ್ಪನ್ನಗಳಿಗೆ ಇನ್ನಷ್ಟು ಹೆಚ್ಚಿನ ಬೆಲೆ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.
ಪ್ರಸಕ್ತ ರೈತರು ಕೇವಲ ಕಚ್ಚಾವಸ್ತು ಅಥವಾ ಆಹಾರ ಪದಾರ್ಥಗಳ ಉತ್ಪಾದನೆಯ ಬಗ್ಗೆಯಷ್ಟೇ ಗಮನ ಹರಿಸುತ್ತಿದ್ದಾರೆ. ಅವುಗಳ ಮೌಲ್ಯವರ್ಧನೆ ಮಾಡುವುದು, ಅದನ್ನು ಉದ್ಯಮದ ಸ್ವರೂಪದಲ್ಲಿ ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕಿದೆ' ಎಂದರು.
ಜಂಟಿ ಕೃಷಿ ನಿರ್ದೇಶಕ ಬಿ.ಶಿವರಾಜು, ಕೃಷಿ ಉದ್ದಿಮೆ ಬಂಡವಾಳ ಸಹಾಯ ಯೋಜನೆ ಮಾಹಿತಿ ಶಿಬಿರದ ಉದ್ದೆೀಶಗಳು, ಕೃಷಿ ವ್ಯವಹಾರ ಅಭಿವೃದ್ಧಿ ಮಾರ್ಗಗಳ ಬಗ್ಗೆ ತಿಳಿಸಿದರು.
ತೋಟಗಾರಿಕಾ ಉಪ ನಿರ್ದೇಶಕ ಶಕೀಲ್ ಅಹಮದ್ ಮಾತನಾಡಿ, `ಹಾಸನ ಜಿಲ್ಲೆಯಲ್ಲಿ ಕೃಷಿಯೇ ಜೀವಾಳ. ಇದನ್ನೇ ಬಳಸಿಕೊಂಡು ಪ್ರಗತಿಯ ಪಥದಲ್ಲಿ ಸಾಗಲು ಸಾಕಷ್ಟು ಅವಕಾಶಗಳಿವೆ. ಅದಕ್ಕಾಗಿ ಸುತ್ತುನಿಧಿ ನೆರವು ಯೋಜನೆ ರೂಪಿಸಲಾಗಿದ್ದು, ಅದರ ಪ್ರಚಾರಕ್ಕಾಗಿ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿದೆ' ಎಂದರು.
ಎಸ್.ಎಫ್.ಎ.ಸಿ. ಯೋಜನಾಧಿಕಾರಿ ಪಿ.ಕೆ. ಪಾಂಡೆ ಕೇಂದ್ರ ಸರ್ಕಾರದ ಕೃಷಿ ಉದ್ದಿಮೆ ಬಂಡವಾಳ ಸಹಾಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.