ಸಿಂಧನೂರು: ತಾಲ್ಲೂಕಿನ ಗಡಿಗ್ರಾಮಗಳಾದ ಚನ್ನಳ್ಳಿ, ಸಿದ್ರಾಂಪುರ, ಗಣೇಶಕ್ಯಾಂಪ್, ಮಾವಿನಮಡು ಮತ್ತು ಗಂಗಾವತಿ ತಾಲ್ಲೂಕಿನ ಬೂದಗುಂಪಾ ಮತ್ತಿತರ ಗ್ರಾಮಗಳ ರೈತರ ನಡುವೆ ಶನಿವಾರ ಮಧ್ಯಾಹ್ನ ಗುಂಪು ಘರ್ಷಣೆ ನಡೆದಿದೆ. ಇದರಲ್ಲಿ ಇಬ್ಬರು ಪೊಲೀಸ್ ಪೇದೆಗಳು, ರೈತರಾದ ಹೊನ್ನಪ್ಪ, ಹುಸೇನಪ್ಪ, ರುದ್ರಪ್ಪ, ದುರುಗಪ್ಪ, ಖಾಜಪ್ಪ, ಕನಕರೆಡ್ಡಿ ಎನ್ನುವವರಿಗೆ ಗಾಯಗಳಾಗಿದೆ. ಗಾಯಾಳುಗಳು ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು ಎರಡೂ ಕಡೆಗಳಲ್ಲಿ ರೈತರು ಗುಂಪು-ಗುಂಪಾಗಿ ಜಮಾಯಿಸಿದ್ದರು. ತುಂಗಭದ್ರಾ ಎಡದಂಡೆ ನಾಲೆ 31/6 ಉಪ ಕಾಲುವೆಯಿಂದ ನೀರು ಪಡೆಯುವ ವಿಷಯದಲ್ಲಿ ಉಂಟಾದ ವಿವಾದವೇ ಘಟನೆಗೆ ಕಾರಣ ಎಂದು ತಿಳಿದುಬಂದಿದೆ.