ಬಾಗಲಕೋಟೆ: ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳು ನಾಡಿನ ಅನುಭವಿ ರೈತರೊಂದಿಗೆ ಒಂದುಗೂಡಿ ಕೃಷಿ ಸಂಶೋಧನೆಯಲ್ಲಿ ತೊಡಗಬೇಕು ಎಂದು ರಾಜ್ಯ ಕೃಷಿ ಮಿಷನ್ ಅಧ್ಯಕ್ಷ ಡಾ. ಎಸ್.ಎ. ಪಾಟೀಲ ಸಲಹೆ ಮಾಡಿದರು.
ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ 3ನೇ ಸಂಸ್ಥಾಪನಾ ದಿನಾಚರಣೆ ಮತ್ತು ಪ್ರಥಮ ತೋಟಗಾರಿಕೆ ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬರಡು ಭೂಮಿಯಲ್ಲೂ ರೈತ ಕೃಷಿ ಮಾಡುವಂತೆ ವಿ.ವಿ.ಗಳು ಕಾರ್ಯ ರೂಪಿಸಬೇಕು. ಇದು ಕೃಷಿ ಮಿಷನ್ ಸೂಚನೆಯೂ ಆಗಿದೆ. ಜೊತೆಗೆ ಕೃಷಿ ಪದವಿ ಪ್ರದಾನಕ್ಕೂ ಮೊದಲು ವಿದ್ಯಾರ್ಥಿಗಳು ಹೊಲದಲ್ಲಿ ಕೆಲಸ ಮಾಡುವುದು ಕಡ್ಡಾಯವಾಗಬೇಕಿದೆ ಎಂದರು.
ಪಕ್ಕದ ಹೊಲದ ರೈತ ಬೆಳೆದ ಬೆಳೆಯನ್ನೇ ಇತರ ರೈತರು ಬೆಳೆಯುವ ಸಂಪ್ರದಾಯವನ್ನು ಬಿಡಬೇಕು. ವೈಜ್ಞಾನಿಕ ಸಂಶೋಧನೆ ಮೂಲಕ ಕೃಷಿಯಲ್ಲಿ ತೊಡಗಿದಾಗ ಉತ್ತಮ ಬೆಳೆ ಬೆಳೆಯಲು ಸಾಧ್ಯ ಎಂದರು.
ಶಾಸಕರಾದ ಡಾ.ಎಂ.ಸಿ. ಸುಧಾಕರ, ಶಾಸಕ ವೀರಣ್ಣ ಚರಂತಿಮಠ, ತೋಟಗಾರಿಕೆ ವಿವಿ ಕುಲಪತಿ ಡಾ.ಎಸ್.ಬಿ. ದಂಡಿನ, ನಿವೃತ್ತ ಕುಲಪತಿ ಡಾ.ಜೆ.ವಿ. ಗೌಡ, ರಾಯಚೂರು ಕೃಷಿ ವಿವಿ ಕುಲಪತಿ ಡಾ.ಬಿ.ವಿ. ಪಾಟೀಲ, ಜಿ.ಪಂ. ಅಧ್ಯಕ್ಷೆ ಕವಿತಾ ದಡ್ಡೇನವರ, ಉಪಾಧ್ಯಕ್ಷ ಹೂವಪ್ಪ ರಾಠೋಡ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಎಪಿಎಂಸಿ ಅಧ್ಯಕ್ಷ ಪ್ರಭು ಗಣಾಚಾರಿ ಮತ್ತಿತರರು ಉಪಸ್ಥಿತರಿದ್ದರು.