ಹಾವೇರಿ: ಖಾಸಗಿ ಚಿಕನ್ ಸಂಸ್ಕರಣಾ ಘಟಕದ ತ್ಯಾಜ್ಯದಿಂದ ಘಟಕದ ಸುತ್ತಮುತ್ತಲಿರುವ ರೈತರ ಜಮೀನುಗಳಲ್ಲಿನ ಬೆಳೆ ಹಾನಿಗೊಳಗಾಗುತ್ತಿದ್ದು, ಜಮೀನು ಜವುಳಾಗುತ್ತಿದೆ. ಕೂಡಲೇ ಹಾನಿಗೊಳಗಾದ ಬೆಳೆಗೆ ಪರಿಹಾರ ಹಾಗೂ ಜವಳು ಸಮಸ್ಯೆಯ ನಿವಾರಣೆಗೆ ಒತ್ತಾಯಿಸಿ ರೈತರು ಬುಧವಾರದಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಿರಂತರ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ತುಂಗಭದ್ರಾ ಪರಿಸರ ಮಾಲಿನ್ಯ ನಿಯಂತ್ರಣ ಮತ್ತು ಜನಜಾಗೃತಿ ಹೋರಾಟ ಸಮಿತಿ ವತಿಯಿಂದ ನಗರದ ಮುರುಘರಾಜೇಂದ್ರ ಮಠದಿಂದ ಪ್ರತಿಭಟನೆ ಆರಂಭಿಸಿದ ರೈತರು, ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಧರಣಿ ಆರಂಭಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ಜಿಲ್ಲೆಯ ರಾಣೆಬೆನ್ನೂರ ತಾಲ್ಲೂಕಿನ ತೆರೆದಹಳ್ಳಿಯಲ್ಲಿನ ವೆಂಕಟೇಶ್ವರ ಹ್ಯಾಚರಿಸ್(ಚಿಕನ್ ಸಂಸ್ಕರಣಾ ಘಟಕ)ದ ತ್ಯಾಜ್ಯದಿಂದ ರೈತರ ಜಮೀನು ಜವುಳಾಗುವ ಮೂಲಕ ಅಪಾರ ಹಾನಿಯಾಗುತ್ತಿದೆ. ಈ ಕುರಿತು ಸಾಕಷ್ಟು ಭಾರಿ ಸಂಸ್ಕರಣಾ ಘಟಕದ ವ್ಯವಸ್ಥಾಪಕರಿಗೆ ಮನವಿ ಮಾಡಿದರೂ ಸಮಸ್ಯೆ ಬಗೆಹರಿಸಲು ಘಟಕದ ಅಧಿಕಾರಿಗಳು ಮುಂದಾಗಿಲ್ಲ ಎಂದು ಆರೋಪಿಸಿದರು.
ರೈತರು ಹಿಂದೆ ಪ್ರತಿಭಟನೆ ಹಮ್ಮಿಕೊಂಡ ಸಮಯದಲ್ಲಿ ತಹಶೀಲ್ದಾರ್ರು ಆಗಮಿಸಿ ಮನವಿ ಸ್ವೀಕರಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಕಾರ್ಖಾನೆ ತ್ಯಾಜ್ಯದಿಂದ ರೈತರ ಜಮೀನುಗಳಲ್ಲಿನ ಬೆಳೆ ಹಾನಿಗೊಳಗಾಗಿವೆ.
ಹಾನಿಗೊಳಗಾದ ಬೆಳೆಗೆ ಪರಿಹಾರ ಕೊಡಿಸಬೇಕು. ಜವುಳಾದ ರೈತರ ಜಮೀನು ಮತ್ತೆ ಯತಾಸ್ಥಿತಿಗೆ ತರಲು ಅಗತ್ಯ ತಾಂತ್ರಿಕತೆ ಬಳಸಿ ಸಮಸ್ಯೆ ಬಗೆಹಿಸಬೇಕು. ಮುಂದಿನ ದಿನಗಳಲ್ಲಿ ಘಟಕದ ತ್ಯಾಜ್ಯ ರೈತರ ಜಮೀನುಗಳಿಗೆ ಬರದಂತೆ ನೋಡಿಕೊಳ್ಳಬೇಕು. ಈ ಎಲ್ಲ ಸಮಸ್ಯೆಗಳ ನಿವಾರಣೆಗೆ ಕೂಡಲೇ ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ ಬಗೆಹರಿಸಬೇಕು ಎಂದು ಹೇಳಿದರು.
ಅಲ್ಲಿವರೆಗೆ ಜಿಲ್ಲಾಡಳಿತ ಕಚೇರಿ ಎದುರಿನ ಪ್ರತಿಭಟನೆ ಮುಂದುವರಿಯಲಿದೆ ಎಂದು ತಿಳಿಸಿದರು. ಪ್ರತಿಭಟನೆ ಹಾಗೂ ಧರಣಿ ಸತ್ಯಾಗ್ರಹದಲ್ಲಿ ರೈತ ಮುಖಂಡರಾದ ಚಂದ್ರಪ್ಪ ಬೇಡರ, ಸುರೇಶಪ್ಪ ಗರಡಿಮನಿ, ಕರಿಬಸಯ್ಯ ಶಂಕ್ರಿಮಠ, ಹೇಮರಡ್ಡಿ ಪಾಟೀಲ, ರಫೀಶ ರಂಗಣ್ಣನವರ, ರಾಜು ಹರಳಳ್ಳಿಮಠ, ಚಂದ್ರಪ್ಪ ಬಣಕಾರ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.