ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಧರಣಿ ಸತ್ಯಾಗ್ರಹ

ಚಿಕನ್‌ ತ್ಯಾಜ್ಯ ಜಮೀನಿಗೆ: ಬೆಳೆ ಹಾನಿ, ಭೂಮಿ ಜವುಳು
Last Updated 26 ಸೆಪ್ಟೆಂಬರ್ 2013, 8:43 IST
ಅಕ್ಷರ ಗಾತ್ರ

ಹಾವೇರಿ: ಖಾಸಗಿ ಚಿಕನ್ ಸಂಸ್ಕರಣಾ ಘಟಕದ ತ್ಯಾಜ್ಯದಿಂದ ಘಟಕದ ಸುತ್ತಮುತ್ತಲಿರುವ ರೈತರ ಜಮೀನು­ಗಳಲ್ಲಿನ ಬೆಳೆ ಹಾನಿಗೊಳಗಾಗುತ್ತಿದ್ದು, ಜಮೀನು ಜವುಳಾಗುತ್ತಿದೆ. ಕೂಡಲೇ ಹಾನಿಗೊಳಗಾದ ಬೆಳೆಗೆ ಪರಿಹಾರ ಹಾಗೂ ಜವಳು ಸಮಸ್ಯೆಯ ನಿವಾರ­ಣೆಗೆ ಒತ್ತಾಯಿಸಿ ರೈತರು ಬುಧವಾ­ರದಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಿರಂತರ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ತುಂಗಭದ್ರಾ ಪರಿಸರ ಮಾಲಿನ್ಯ ನಿಯಂತ್ರಣ ಮತ್ತು ಜನ­ಜಾಗೃತಿ ಹೋರಾಟ ಸಮಿತಿ ವತಿಯಿಂದ ನಗರದ ಮುರುಘರಾಜೇಂದ್ರ ಮಠ­ದಿಂದ ಪ್ರತಿಭಟನೆ ಆರಂಭಿಸಿದ ರೈತರು, ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಪಾದಯಾತ್ರೆ ಮೂಲಕ ಜಿಲ್ಲಾಧಿ­ಕಾರಿಗಳ ಕಚೇರಿಗೆ ತೆರಳಿ ಧರಣಿ ಆರಂಭಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ಜಿಲ್ಲೆಯ ರಾಣೆಬೆನ್ನೂರ ತಾಲ್ಲೂಕಿನ ತೆರೆದಹಳ್ಳಿಯಲ್ಲಿನ ವೆಂಕಟೇಶ್ವರ ಹ್ಯಾಚ­ರಿಸ್(ಚಿಕನ್ ಸಂಸ್ಕರಣಾ ಘಟಕ)ದ ತ್ಯಾಜ್ಯದಿಂದ ರೈತರ ಜಮೀನು ಜವು­ಳಾಗುವ ಮೂಲಕ ಅಪಾರ ಹಾನಿಯಾ­ಗುತ್ತಿದೆ. ಈ ಕುರಿತು ಸಾಕಷ್ಟು ಭಾರಿ ಸಂಸ್ಕರಣಾ ಘಟಕದ ವ್ಯವಸ್ಥಾಪಕರಿಗೆ ಮನವಿ ಮಾಡಿದರೂ ಸಮಸ್ಯೆ ಬಗೆಹ­ರಿಸಲು ಘಟಕದ ಅಧಿಕಾರಿಗಳು ಮುಂದಾ­ಗಿಲ್ಲ ಎಂದು ಆರೋಪಿಸಿದರು.

ರೈತರು ಹಿಂದೆ ಪ್ರತಿಭಟನೆ ಹಮ್ಮಿ­ಕೊಂಡ ಸಮಯದಲ್ಲಿ ತಹಶೀಲ್ದಾ­ರ್‌ರು ಆಗಮಿಸಿ ಮನವಿ ಸ್ವೀಕರಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಯಾವುದೇ ಪ್ರಯೋ­ಜನವಾಗಿಲ್ಲ. ಕಾರ್ಖಾನೆ ತ್ಯಾಜ್ಯ­ದಿಂದ ರೈತರ ಜಮೀನುಗಳಲ್ಲಿನ ಬೆಳೆ ಹಾನಿಗೊಳಗಾಗಿವೆ.

ಹಾನಿಗೊಳ­ಗಾದ ಬೆಳೆಗೆ ಪರಿಹಾರ ಕೊಡಿಸಬೇಕು. ಜವುಳಾದ ರೈತರ ಜಮೀನು ಮತ್ತೆ ಯತಾಸ್ಥಿತಿಗೆ ತರಲು ಅಗತ್ಯ ತಾಂತ್ರಿಕತೆ ಬಳಸಿ ಸಮಸ್ಯೆ ಬಗೆಹಿಸಬೇಕು. ಮುಂದಿನ ದಿನಗಳಲ್ಲಿ ಘಟಕದ ತ್ಯಾಜ್ಯ ರೈತರ ಜಮೀನುಗಳಿಗೆ ಬರದಂತೆ ನೋಡಿಕೊಳ್ಳಬೇಕು. ಈ ಎಲ್ಲ ಸಮಸ್ಯೆ­ಗಳ ನಿವಾರಣೆಗೆ ಕೂಡಲೇ ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ ಬಗೆಹರಿಸಬೇಕು ಎಂದು ಹೇಳಿದರು.

ಅಲ್ಲಿವರೆಗೆ ಜಿಲ್ಲಾಡಳಿತ ಕಚೇರಿ ಎದುರಿನ ಪ್ರತಿಭಟನೆ ಮುಂದುವರಿ­ಯಲಿದೆ ಎಂದು ತಿಳಿಸಿದರು. ಪ್ರತಿಭಟನೆ ಹಾಗೂ ಧರಣಿ ಸತ್ಯಾಗ್ರಹದಲ್ಲಿ ರೈತ ಮುಖಂಡರಾದ ಚಂದ್ರಪ್ಪ ಬೇಡರ, ಸುರೇಶಪ್ಪ ಗರಡಿಮನಿ, ಕರಿಬಸಯ್ಯ ಶಂಕ್ರಿಮಠ, ಹೇಮರಡ್ಡಿ ಪಾಟೀಲ, ರಫೀಶ ರಂಗಣ್ಣನವರ, ರಾಜು ಹರಳಳ್ಳಿಮಠ, ಚಂದ್ರಪ್ಪ ಬಣಕಾರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT