ಮಂಡ್ಯ: ಕೊಡಗು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಕೃಷ್ಣರಾಜಸಾಗರ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಕೆಆರ್ಎಸ್ ಅಚ್ಚುಕಟ್ಟು ಪ್ರದೇಶದ ರೈತರು ಮತ್ತು ಕುಡಿಯುವ ನೀರಿಗಾಗಿ ಈ ಜಲಾಶಯ ಅವಲಂಬಿಸಿರುವ ಮೈಸೂರು ಹಾಗೂ ಬೆಂಗಳೂರು ನಾಗರಿಕರ ಮೊಗದಲ್ಲಿ ಮಂದಹಾಸ ಮೂಡಿದೆ.
ಜಲಾಶಯದ ಒಳಹರಿವು 44,972 ಕ್ಯೂಸೆಕ್ ಆಗಿದೆ, 1,557 ಕ್ಯೂಸೆಕ್ನಷ್ಟು ನೀರನ್ನು ಹೊರಬಿಡಲಾಗುತ್ತಿದೆ. ಗುರುವಾರ ನೀರಿನಮಟ್ಟವು 100 ಅಡಿಗಳ ಅಂಚಿಗೆ ಬಂದು ನಿಂತಿದೆ. ಒಂದೇ ದಿನದಲ್ಲಿ 5 ಅಡಿಯಷ್ಟು ಹೆಚ್ಚು ನೀರು ಬಂದಿದೆ. ಜೂನ್ 12ರಂದು ಜಲಾಶಯದ ನೀರಿನಮಟ್ಟ 63 ಅಡಿಗೆ ಕುಸಿದಿತ್ತು, ಹತ್ತು ವರ್ಷಗಳಲ್ಲಿ ನೀರಿನಮಟ್ಟ ಇಷ್ಟು ಕಡಿಮೆಯಾಗಿದ್ದು ಇದೇ ಮೊದಲು. ನಂತರ ಕೆ.ಆರ್.ಎಸ್ನಲ್ಲಿ ನೀರಿನ ಮಟ್ಟ ದಿನ ದಿನಕ್ಕೆ ಹೆಚ್ಚಳವಾಯಿತು. ಇದನ್ನು ಈ ನಾಲ್ಕು ಚಿತ್ರಗಳಲ್ಲಿ ಕಾಣಬಹುದು.