ಚಿಕ್ಕನಾಯಕನಹಳ್ಳಿ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆಯಲ್ಲಿ ವರ್ತಕರ ವ್ಯಾಪಾರಿ ಧೋರಣೆಯಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಮಾರುಕಟ್ಟೆ ಎಂದರೆ ರೈತರು ಭಯ ಪಡುವಂತಾಗಿದೆ ಎಂದು ತೋಟಗಾರಿಕೆ ಇಲಾಖೆ ನಿವೃತ್ತ ಹೆಚ್ಚುವರಿ ನಿರ್ದೇಶಕ ಡಾ.ಹಿತ್ತಲಮನಿ ಟೀಕಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ತೆಂಗು ದಿನಾಚರಣೆ ಮತ್ತು ತೆಂಗು ಬೆಳೆಗಾರರ 1 ದಿನದ ಕಾರ್ಯಾ-ಗಾರದಲ್ಲಿ ಮಾತನಾಡಿ, ಬೆಲೆ ಕುಸಿತ ತೆಂಗು ಬೆಳೆಗಾರರ ಅಧೋಗತಿಗೆ ಕಾರಣವಾಗಿದೆ. ರೈತರಿಗೆ ನ್ಯಾಯಯುತ ಬೆಲೆ ಸಿಗದಂತೆ ವರ್ತಕರು ಷಢ್ಯಂತ್ರ ರೂಪಿಸುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ಆರ್.ಶಶಿಧರ್ ಮಾತನಾಡಿ, ಅನಾವೃಷ್ಟಿಯಿಂದ ತಾಲ್ಲೂಕಿನಲ್ಲಿ ಶೇ.50ಕ್ಕೂ ಹೆಚ್ಚು ತೆಂಗಿನ ಮರಗಳು ಒಣಗಿವೆ. ಅಧಿಕಾರಿಗಳು ಲಂಚ ತೆಗೆದುಕೊಂಡ ಕುಳಿತಲ್ಲೇ ಬೆಳೆ ಹಾನಿಯ ವರದಿ ತಯಾರಿಸುವುದನ್ನು ಬಿಟ್ಟು ರೈತರ ತೋಟಗಳಿಗೆ ಖುದ್ದಾಗಿ ತೆರಳಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಎಂ.ಎನ್.ಶಿವರಾಜ್ ಮಾತನಾಡಿ, ಸಂಘಟನೆ ತಳ ಗಟ್ಟಿಯಾದರೆ ರೈತರ ಭವಿಷ್ಯ ಭದ್ರ ಎಂದರು.
ಹಸಿರು ಸೇನೆ ರಾಜ್ಯಾಧ್ಯಕ್ಷ ಕೆಂಕೆರೆ ಸತೀಶ್ ‘ಪಕ್ಷ ಜಾತಿ ಮಿರಿ ಒಗ್ಗಟ್ಟಾಗಿ ಹೋರಾಡಿ’ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮಾತನಾಡಿ, ತೆಂಗು ಬೆಳೆಗಾರರಿಗೆ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸಬೇಕು. ವಿದ್ಯುತ್ ಅನ್ನು ರೈತರಿಗೆ ಕಲ್ಪಿಸುವಲ್ಲಿ ಈ ಭಾಗದ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಜಿ.ಪಂ.ಸದಸ್ಯರಾದ ಲೋಹಿತಾಬಾಯಿ, ಎಚ್.ಬಿ.ಪಂಚಾಕ್ಷರಯ್ಯ, ನಾಫೆಡ್ ಮುಚ್ಚಬಾರದು. ಬೆಳೆಗಾರರ ಸಮಿತಿಗಳನ್ನು ರಚಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. ತೆಂಗು ಬೆಳೆಗಾರರ ಸಂಘದ ರಾಜ್ಯ ಸಂಚಾಲಕ ಸಿದ್ಧಬಸಪ್ಪ ಮಾತನಾಡಿ ತಾಲ್ಲೂಕಿನಲ್ಲಿ ತೆಂಗು ಬೆಳೆಗಾರರು ಸಂಘಟಿತರಾಗುವಲ್ಲಿ ವಿಫಲವಾಗಿದ್ದಾರೆ. ಈಗಲಾದರೂ ಒಗ್ಗೂಡಿ ಎಂದು ಕಿವಿಮಾತು ಹೇಳಿದರು. ಉದ್ಯಮಿ ಜಯಚಂದ್ರ ತೆಂಗು ಮೌಲ್ಯವರ್ಧನೆಯಲ್ಲಿ ಕೈಗೊಂಡ ಪ್ರಯೋಗಗಳನ್ನು ವಿವರಿಸಿದರು.
ತಾಲ್ಲೂಕು ತೆಂಗುಬೆಳೆಗಾರರ ಸಂಘದ ಅಧ್ಯಕ್ಷ ಜೆ.ಆರ್.ಲಿಂಗರಾಜು ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯರಾದ ಎಸ್.ಜಿ.ಮಂಜುಳಾ, ನಿಂಗಮ್ಮ, ಜಾನಮ್ಮ, ತಾ.ಪಂ.ಸದಸ್ಯ ನಿರಂಜನಮೂರ್ತಿ, ಜಿ.ಎಸ್.ಚನ್ನಬಸಪ್ಪ, ತೋಟಗಾರಿಕೆ ಇಲಾಖೆಯ ಡಾ.ದುಂಡಿ, ಜಿಲ್ಲಾ ನಿರ್ದೇಶಕಿ ಸುಜಾತಾ, ಉಪನಿರ್ದೇಶಕಿ ಮಹಾಲಕ್ಷ್ಮೀ, ವಿಜ್ಞಾನಿಗಳಾದ ಡಾ.ಪಿ.ಬಿ.ಬಸವರಾಜ್, ಡಾ.ವಿ.ದೇವಪ್ಪ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.