ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಹೋರಾಟ ಹಿಂದಕ್ಕೆ

Last Updated 12 ಜುಲೈ 2012, 8:40 IST
ಅಕ್ಷರ ಗಾತ್ರ

ಧಾರವಾಡ: ರೈತರ ಸಾಲ ಮನ್ನಾ ಮಾಡಬೇಕು, ತಾತ್ಕಾಲಿಕ ಪಡಿತರ ಚೀಟಿಗಳ ಬದಲಾಗಿ ಕಾಯಂ ಪಡಿತರ ಚೀಟಿಗಳನ್ನು ವಿತರಿಸಬೇಕು, ಬೆಳೆ ವಿಮೆ ಹಣವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಮಾಜಿ ಶಾಸಕ ವಿನಯ ಕುಲಕರ್ಣಿ ನೇತೃತ್ವದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆಯನ್ನು, ಬೇಡಿಕೆ ಈಡೇರಿಸುವ ಬಗ್ಗೆ ಜಿಲ್ಲಾಧಿಕಾರಿ ದರ್ಪಣ ಜೈನ್ ನೀಡಿದ ಭರವಸೆ ಹಿನ್ನೆಲೆಯಲ್ಲಿ ಬುಧವಾರ ಹಿಂದಕ್ಕೆ ಪಡೆಯಲಾಯಿತು.

ಈ ನಿರ್ಧಾರವನ್ನು ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ ವಿನಯ ಕುಲಕರ್ಣಿ, “ನಮ್ಮ ಬೇಡಿಕೆಗಳಲ್ಲಿ ತಮ್ಮ ವ್ಯಾಪ್ತಿಗೊಳಪಡುವ ಕೆಲವನ್ನು ಈಡೇರಿಸಲು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ. ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸಮಸ್ಯೆಯನ್ನು ನಿವಾರಿಸಲು ಹೆಸ್ಕಾಂಗೆ ಸೂಚಿಸುವುದಾಗಿ ತಿಳಿಸಿದ್ದು, ಪಡಿತರ ಚೀಟಿಗಳನ್ನು ಕಾಯಂಗೊಳಿಸಲು ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿಯೂ ತಿಳಿಸಿದ್ದಾರೆ.

ಬೆಳೆ ವಿಮೆ ಈಗಾಗಲೇ ಬಿಡುಗಡೆ ವಿಷಯ ಸರ್ಕಾರದ ಮಟ್ಟದಲ್ಲಿ ಇತ್ಯರ್ಥವಾಗಬೇಕಿದ್ದು, ಆ ಬಗ್ಗೆ ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ. ನೂತನ ಮುಖ್ಯಮಂತ್ರಿಯಾಗಿ ಗುರುವಾರ ಅಧಿಕಾರ ಸ್ವೀಕರಿಸಲಿರುವ ಜಗದೀಶ ಶೆಟ್ಟರ್ ಅವರು ನಗರಕ್ಕೆ ಬಂದ ಕೂಡಲೇ ಅವರಿಗೆ ನಮ್ಮ ಬೇಡಿಕೆಗಳನ್ನು ತಿಳಿಸಿ ಮಾತುಕತೆ ಏರ್ಪಡಿಸುವುದಾಗಿ ತಿಳಿಸಿದ್ದಾರೆ. ಇದು ಹೋರಾಟದ ಯಶಸ್ಸಲ್ಲ. ಆದರೆ ಆಗಸ್ಟ್ 15ರವರೆಗೆ ಬೇಡಿಕೆ ಈಡೇರಲು ಗಡುವು ನೀಡಿ ಅಹೋರಾತ್ರಿ ಧರಣಿ ಹಿಂದಕ್ಕೆ ಪಡೆಯುತ್ತಿದ್ದೇವೆ” ಎಂದು ತಿಳಿಸಿದರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳು ಧರಣಿ ಸ್ಥಳಕ್ಕೆ ಆಗಮಿಸಿ ಮಾತುಕತೆ ನಡೆಸಿದರು. ಬಹುತೇಕ ಮಂಗಳವಾರ ತಮ್ಮ ಕಚೇರಿಯಲ್ಲಿ ಕರೆದಿದ್ದ ರೈತರ ಸಭೆಯಲ್ಲಿ ಭರವಸೆ ನೀಡಿದ ಸಂಗತಿಗಳನ್ನೇ ಅವರು ಇಲ್ಲಿಯೂ ಪುನರುಚ್ಚರಿಸಿದರು. ಅದಕ್ಕೂ ಮುನ್ನ ಎಸಿಪಿ ಸಂಜೀವ್ ಪಾಟೀಲ ಅವರೂ ಮಾತುಕತೆ ನಡೆಸಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು.

ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ, “ಕಳಸಾ-ಬಂಡೂರಿ ಹಾಗೂ ಬೆಣ್ಣಿಹಳ್ಳಕ್ಕೆ ಶಾಶ್ವತ ಯೋಜನೆಗಳನ್ನು ರೂಪಿಸಲು ಭಾವಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ತಮ್ಮ ಪ್ರಥಮ ಸಚಿವ ಸಂಪುಟದಲ್ಲಿಯೇ ನಿರ್ಧಾರ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.

ಕಾಣದ ಕಾಂಗ್ರೆಸ್ ಮುಖಂಡರು

ಮಾಜಿ ಶಾಸಕ ವಿನಯ ಕುಲಕರ್ಣಿ ನೇತೃತ್ವದಲ್ಲಿ ನಡೆದ ರೈತರ ಹೋರಾಟಕ್ಕೆ ಕಾಂಗ್ರೆಸ್ಸಿಗರಿಂದಲೇ ಅಗತ್ಯ ಬೆಂಬಲ ವ್ಯಕ್ತವಾಗಲಿಲ್ಲ. ಅಮ್ಮಿನಭಾವಿಯಿಂದ ಧಾರವಾಡದವರೆಗೆ ಮೊದಲ ದಿನ ನಡೆದ ಪಾದಯಾತ್ರೆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಬಳಿ ಬಂದು ಮಾಜಿ ಸಚಿವ ಎಸ್.ಆರ್.ಮೋರೆ ಭಾಷಣ ಮಾಡಿದ್ದರಷ್ಟೇ. ಬರ ಕಾಮಗಾರಿಗೆ ಆಗ್ರಹಿಸಿ ಬೃಹತ್ ರೈತ ಹೋರಾಟ ಸಂಘಟಿಸಿದ್ದ ಕಲಘಟಗಿ ಶಾಸಕ ಸಂತೋಷ ಲಾಡ್ ಅವರೂ ಬರಲಿಲ್ಲ. ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಪಾಲಿಕೆ ಸದಸ್ಯ     ರಾಮಣ್ಣ ಸವದತ್ತಿ ಅವರನ್ನು ಹೊರತುಪಡಿಸಿದರೆ ಬಹುತೇಕ ಕಾಂಗ್ರೆಸ್ಸಿಗರು ಪ್ರತಿಭಟನೆಯಿಂದ ದೂರ ಉಳಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT