ಎಚ್.ಡಿ.ಕೋಟೆ: ರಾಜ್ಯ ಬಿಜೆಪಿ ಸರ್ಕಾರ ರೈತರನ್ನು ಕಡೆಗಣಿಸಿದೆ ಎಂದು ವಿಧಾನ ಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು. ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಬುಧವಾರ ಬೆಳಿಗ್ಗೆ ನಾಡ ರಕ್ಷಣಾ ರ್ಯಾಲಿಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಅಕ್ರಮ ಗಣಿಗಾರಿಕೆ ಮಾಡುತ್ತಿರುವ ರೆಡ್ಡಿ ಸಹೊದರರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿದರು.
ಬಿ.ಎಸ್. ಯಡಿಯೂರಪ್ಪ ರೈತರಿಗೆ ವಿದ್ಯುತ್ ನೀಡುವುದರಲ್ಲೂ ವಿಫಲವಾಗಿದ್ದಾರೆ. ಗ್ರಾಮೀಣ ಭಾಗದ ಬಡವರಿಗೆ ಒಂದೇ ಒಂದು ಆಶ್ರಯ ಮನೆಯನ್ನು ಹಾಗೂ ನಿವೇಶನವನ್ನೂ ನೀಡಿಲ್ಲ. ಯಡಿಯೂರಪ್ಪ ನಾನು ಮಣ್ಣಿನ ಮಗ ಎಂದು ಹೇಳಿಕೊಳ್ಳುತ್ತಾರೆ. ನಾವೆಲ್ಲಾ ಯಾರು? ಎಂದು ಅವರು ಪ್ರಶ್ನಿಸಿದರು. ಗ್ರಾಮ ಪಂಚಾಯಿತಿಗಳಿಗೆ ಯಾವುದೇ ಅನುದಾನಗಳೂ ಕರ್ನಾಟಕ ಸರ್ಕಾರದಿಂದ ಬಿಡುಗಡೆಯಾಗಿಲ್ಲ. ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆ ಇಲ್ಲದಿದ್ದರೆ ಗ್ರಾಮ ಪಂಚಾಯಿತಿಗಳನ್ನು ಬಾಗಿಲು ಮುಚ್ಚಬೇಕಾಗಿತ್ತು ಎಂದರು.
ಶಾಸಕ ಚಿಕ್ಕಣ್ಣ, ಜಿಲ್ಲಾಧ್ಯಕ್ಷ ಧರ್ಮಸೇನಾ, ಕೆ.ಪಿ.ಸಿ.ಸಿ. ಸದಸ್ಯರಾದ ಜಯಮಂಗಳ, ಸುಂದರ್ದಾಸ್, ಜಿ.ಪಂ. ಸದಸ್ಯರಾದ ಎಚ್.ಸಿ. ಮಂಜುನಾಥ್, ನಂದಿನಿ, ಬ್ಲಾಕ್ ಅಧ್ಯಕ್ಷ ಬಾಲಯ್ಯ, ಬಿ.ವಿ.ಬಸವರಾಜು, ಹೊಸಹಳ್ಳಿ ನಾಗರಾಜು, ಬಿ.ಟಿ.ನರಸಿಂಹಮೂರ್ತಿ, ಚಾ.ಕೃಷ್ಣ, ಯಡತೊರೆ ಕುಮಾರ, ಮೇಟಿಕುಪ್ಪೆ ಗುರುಸ್ವಾಮಿ, ಮಹದೇವಪ್ಪ, ಸೀತಾರಾಮು, ಮುಖಂಡರಾದ ಸೋಮೇಶ್, ಸಿದ್ದರಾಮು, ಸಫಿ, ವೇಣು, ಜಮೀರ್ ಇನ್ನಿತರರು ಭಾಗವಹಿಸಿದ್ದರು.