ಶಹಾಪುರ: ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ರೈತರಿಗಾಗಿ ಹಮ್ಮಿಕೊಳ್ಳಲಾಗಿದ್ದ ಕೃಷಿಮೇಳ ಹಾಗೂ ಜಿಲ್ಲಾ ಕೃಷಿ ಉತ್ಸವದಲ್ಲಿ ಅನ್ನದಾನ ಅಳಲಿನ ಮೊಸಳೆ ಕಣ್ಣಿರು ಹಾಕಿದ ಜನಪ್ರತಿನಿಧಿಗಳು ವೈಜ್ಞಾನಿಕ ತಂತ್ರಜ್ಞಾನದ ಕೃಷಿಯಲ್ಲಿ ರೈತರು ತೊಡಗಬೇಕು ಮತ್ತು ಅಧಿಕಾರಿಗಳ ಹೊಗಳಿಕೆಯ ಠೇಂಕಾರ ಮಾತುಗಳಿಗೆ ಸಭೆ ಸಿಮೀತವಾಗಿತ್ತು.
ಮಣ್ಣಲ್ಲಿ ಮಣ್ಣಾಗಿ ದುಡಿಯುವ ಒಬ್ಬ ರೈತ ಪ್ರತಿನಿಧಿಯನ್ನು ವೇದಿಕೆ ಮೇಲೆ ಕರೆಯದೆ ಸಂಘಟಕರು ರೈತರ ಹೆಸರಿನಲ್ಲಿ ಮೊತ್ತೊಮ್ಮೆ ಶೋಷಣೆ ಮಾಡಿದ್ದಾರೆ ಎಂದು ಪ್ರಾಂತ ರೈತ ಸಂಘವು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಜನಪ್ರತಿನಿಧಿಗಳು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ಆಡಳಿತ ಸಾಧನೆಯನ್ನು ಹೊಗಳಿದರೆ, ಅಧಿಕಾರಿಗಳು ಜನಪ್ರತಿನಿಧಿಗಳ ಢೋಂಗಿ ಅಶ್ವಾಸನೆ ಹಾಗೂ ಸಭೆಗೆ ಬಂದ ವೈಖರಿ ಬಗ್ಗೆ ಪ್ರಸ್ತಾಪಿಸಿ ಚಪ್ಪಾಳೆ ಗಿಟ್ಟಿಸಿ ಹೌದಪ್ಪಳ ಸಭೆಯಾಗಿ ರೂಪಾಂತರಿಸಿದ್ದು ಸರಿಯಲ್ಲವೆಂದು ಸಿದ್ದಯ್ಯ ಹೇಳಿದ್ದಾರೆ.
ಮತ್ತೊಬ್ಬರಿಗೆ ಸಮಯ ಪಾಲನೆ ಹೇಳುವ ಆಡಳಿತ ಮಂಡಳಿ ಅದರಿಂದ ಮಾರುದ್ದ ದೂರು ಉಳಿದುಕೊಂಡಿತು. 2ರಿಂದ 3ಗಂಟೆಗೆ ನಡೆಯಬೇಕಾದ ಕೃಷಿಕರಿಗಾಗಿ ಕಾನೂನು ಚರ್ಚೆ 3ಗಂಟೆಗೆ ಪ್ರಾರಂಭವಾಗಿ ಒಂದು ಗಂಟೆಗೂ ಹೆಚ್ಚಿನ ಕಾಲಾವಕಾಶ ನುಂಗಿತು. ಇನ್ನೂ ಉಳಿದ ತೊಗರಿ ಬೇಸಾಯ ಕ್ರಮ, ಹತ್ತಿ ಉತ್ಪಾದನೆ, ಸಮಗ್ರ ಕೃಷಿ, ಬಾಳೆ ಬೇಸಾಯ, ರೇಶ್ಮೆ, ಕಬ್ಬು ಬೇಸಾಯ ಮಹತ್ವದ ರೈತರಿಂದ ರೈತರಿಗೆ ಸಂವಾದ ಕಾರ್ಯಕ್ರಮಗಳು ಕಾಟಾಚಾರಕ್ಕೆ ಮಾತ್ರ ಸಿಮೀತವಾಗಿದ್ದು ಇದು ಒಂದು ಬಗೆ ರೈತರನ್ನು ಶೋಷಣೆಯ ಕ್ರಮವೆಂದು ಅವರು ದೂರಿದ್ದಾರೆ.
ಪರೇಡ್: ಕೃಷಿ ಮೇಳದ ಉದ್ಘಾಟನೆಗೆ ಆಗಮಿಸಿದ ಉಸ್ತುವಾರಿ ಸಚಿವರು ಕೆಲ ಹೊತ್ತಿನಲ್ಲಿ ಸಮಯ ಪ್ರಜ್ಞೆಯ ಬಗ್ಗೆ ಹೇಳುತ್ತಾ ವೇದಿಕೆಯಿಂದ ನಿರ್ಗಮಿಸಿದರೆ ಅದೇ ಹಾದಿಯನ್ನು ತನ್ನ ಭಾಷದ ಸರದಿ ಮುಕ್ತಾಯವಾದ ಕ್ಷಣದಲ್ಲಿಯೇ ಅಫಜಲಪೂರ ಶಾಸಕ ಮಾಲಿಕಯ್ಯ ಗುತ್ತೇದಾರ ಹಾಗೂ ಯಾದಗಿರಿ ಶಾಸಕ ಡಾ.ಎ.ಬಿ.ಮಾಲಕರಡ್ಡಿ ಸಭೆಯಿಂದ ಹೊರ ಬಂದರು. ಬಂದಪುಟ್ಟ ಹೋದ ಪುಟ್ಟ ಎನ್ನುವಂತೆ ಉದ್ಘಾಟನೆಯಲ್ಲಿ ಪೋಜುಕೊಟ್ಟು ಸ್ಥಳೀಯ ಶಾಸಕ ಶರಣಬಸಪ್ಪ ದರ್ಶನಾಪೂರ ಕ್ಷಣಾರ್ಧದಲ್ಲಿ ಸಭೆಯಿಂದ ಮಾಯವಾದರು ಎಂದು ರೈತ ಸಂಘದ ಮುಖಂಡ ಎಸ್.ಎಂ.ಸಾಗರ ಆರೋಪಿಸಿದ್ದಾರೆ.
ಕನಿಷ್ಠಪಕ್ಷ ರೈತರ ನೋವು-ನಲಿವಿನ ಚಿಂತನೆ ವೇದಿಕೆಯಲ್ಲಿ ಕೂಡದಷ್ಟು ಪುರುಸೊತ್ತು ನಮ್ಮ ಜನಪ್ರತಿನಿಧಿಗಳಿಗೆ ಇಲ್ಲವೆಂದ ಮೇಲೆ ರೈತರ ಸಮಸ್ಯೆಗೆ ಪರಿಹಾರ ಎಲ್ಲಿ ಸಿಗುವುದು ಎಂದು ಸಾಗರ ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.