ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ

ವಿದ್ಯುತ್ ಪ್ರಸರಣ ಕೇಂದ್ರ ಕಾರ್ಯಾರಂಭ
Last Updated 8 ಫೆಬ್ರುವರಿ 2013, 9:54 IST
ಅಕ್ಷರ ಗಾತ್ರ

ನರಸಿಂಹರಾಜಪುರ: ತಾಲ್ಲೂಕಿನಾದ್ಯಂತ ಕಳೆದ ಹಲವಾರು ತಿಂಗಳಿನಿಂದಲೂ ವಿದ್ಯುತ್ ಇದ್ದರೂ ಗುಣಮಟ್ಟದ ವಿದ್ಯುತ್ ಪೂರೈಕೆಯ ಸಮಸ್ಯೆಯಿಂದ ಕೃಷಿಕರು, ಉದ್ಯಮಿಗಳು ಹಾಗೂ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸಬೇಕಾದ ಸಮಸ್ಯೆ ನಿರ್ಮಾಣವಾಗಿತ್ತು.

ಇಲ್ಲಿನ ಮೆಸ್ಕಾಂ ಕಚೇರಿ ಆವರಣದಲ್ಲಿ ನಿರ್ಮಿಸಲಾಗಿರುವ 33/11 ಕೆ.ವಿ ವಿದ್ಯುತ್ ಪ್ರಸರಣ ಕೇಂದ್ರ ಶೀಘ್ರದಲ್ಲಿ ಉದ್ಘಾಟನೆಯಾಗಲಿದ್ದು,  ತಾಲ್ಲೂಕಿನ ಜನರ ಬಹುದಿನದ ಕನಸು ನನಸಾಗುವ ದಿನ ಹತ್ತಿರದಲ್ಲಿಯೇ ಇದೆ.

ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮದಲ್ಲಿರುವ ಕೆಪಿಟಿಸಿಎಲ್‌ನಿಂದ ನಿರ್ಮಿಸಿರುವ 110 ಕೆ.ವಿ ಸಾಮರ್ಥ್ಯದ ವಿದ್ಯುತ್ ಪ್ರಸರಣ ಕೇಂದ್ರದಿಂದ ಪ್ರಸ್ತುತ ತಾಲ್ಲೂಕಿನ ವಿದ್ಯುತ್ ಸರಬರಾಜಾಗುತ್ತಿದೆ.

ಇಲ್ಲಿನ ಮೆಸ್ಕಾಂ ಇಲಾಖೆಯ ಆವರಣದಲ್ಲಿ ರೂ.16.23ಕೋಟಿ ವೆಚ್ಚದಲ್ಲಿ ಮೆಸ್ಕಾಂ ಇಲಾಖೆಯಿಂದ 33/11 ಕೆ.ವಿ ಸಾಮರ್ಥ್ಯದ ವಿದ್ಯುತ್ ಪ್ರಸರಣ ಕೇಂದ್ರದ ಕಾಮಗಾರಿ  2012ರ ಜುಲೈನಲ್ಲಿಯೇ ಪೂರ್ಣಗೊಂಡಿತ್ತು. ಅಲ್ಲದೆ ಮುತ್ತಿನಕೊಪ್ಪದಿಂದ ಎನ್.ಆರ್.ಪುರದವರೆಗೆ 33/11 ಕೆ.ವಿ ಸಾಮರ್ಥ್ಯದ ವಿದ್ಯುತ್ ಮಾರ್ಗಕ್ಕೆ ಗೋಪುರಗಳನ್ನು ನಿರ್ಮಿಸಿ  ಕಾಮಗಾರಿಯೂ ಸಂಪೂಣ ಪೂರ್ಣಗೊಂಡಿತ್ತು.

ಆದರೆ ಈ ಮಾರ್ಗದಲ್ಲಿ ವಿದ್ಯುತ್‌ಹರಿಸಲು ವಿದ್ಯುತ್ ಮಾರ್ಗ ಹಾದು ಹೋಗಿರುವ ಕೆಲವು ರಬ್ಬರ್ ತೋಟದ ಮಾಲೀಕರು ಹಾಗೂ ರೈತರು ಪರಿಹಾರಕ್ಕೆ ಒತ್ತಾಯಿಸಿದ್ದರಿಂದ ಇದು ಉದ್ಘಾಟನೆಗೊಳ್ಳಲು ಅಡಚಣೆಯಾಗಿತ್ತು. ಇದಕ್ಕೆ ಇದ್ದ ಬಹುತೇಕ  ಅಡೆತಡೆಗಳನ್ನು ಮಾತುಕತೆ ಮೂಲಕ ಬಗೆಹರಿಸಲಾಗಿರುವುದರಿಂದ ಉದ್ಘಾಟನೆಗೆ ಇದ್ದ ವಿಘ್ನಗಳು ನಿವಾರಣೆಯಾಗಿದೆ ಎನ್ನಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಎನ್.ಜೀವರಾಜ್ ಶನಿವಾರ ಉದ್ಘಾಟಿಸುವ ಸಾಧ್ಯತೆಯಿದೆ ಎಂದು ಮೂಲಗಳು ಪ್ರಜಾವಾಣಿಗೆ ತಿಳಿಸಿವೆ. ಇದರಿಂದ ಈ ಭಾಗದ ಕುಡಿಯುವ ನೀರಿನ ಸಮಸ್ಯೆಗೆ, ಕೃಷಿಗೆ, ಉದ್ಯಮಿಗಳಿಗೆ ಕಾಡುತ್ತಿದ್ದ ಓಲ್ಟೇಜ್ ಸಮಸ್ಯೆ ಬಹುತೇಕ ನಿವಾರಣೆಯಾಗಿ ಉನ್ನತ ಗುಣಮಟ್ಟದ ವಿದ್ಯುತ್‌ಲಭ್ಯವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಈ ಮಾರ್ಗದಲ್ಲಿ ವಿದ್ಯುತ್ ಹರಿಸಲು ಪ್ರಾರಂಭಿಸಿದ ನಂತರ ಇದರ ಮಾರ್ಗ ಹಾದು ಹೋಗುವ ಸ್ಥಳದ ವ್ಯಾಪ್ತಿಯ ಸುತ್ತ 15 ಮೀಟರ್ ವ್ಯಾಪ್ತಿಯಲ್ಲಿ ಮರ ಬೆಳೆಸುವುದು ಮಾಡುವಂತಿಲ್ಲ ಎಂದು ಇಲಾಖೆ ಮೂಲಗಳು ತಿಳಿಸಿವೆ. 

ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇದನ್ನು ಶೀಘ್ರದಲ್ಲೇ ಉದ್ಘಾಟಿಸುವ ಉದ್ದೇಶಹೊಂದಿದ್ದು, ವಿದ್ಯುತ್‌ಮಾರ್ಗ ಹಾದು ಹೋಗಿರುವ ಸ್ಥಳದಲ್ಲಿರುವ ಸಮಸ್ಯೆ ನಿವಾರಿಸುವಲ್ಲಿ ಪ್ರಯತ್ನ ನಡೆಸಲಾಗಿದೆ. ಇದನ್ನು ಸಣ್ಣ ಕಾರ್ಯಕ್ರಮದ ಮೂಲಕ ಚಾಲನೆ ನೀಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಎನ್.ಜೀವರಾಜ್ ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT