ಹುಣಸಗಿ: ಸಮೀಪದ ನಾರಾಯಣಪುರ ಬಸವಸಾಗರ ಅಣೆಕಟ್ಟಿನಿಂದ ಹರಿದು ಹೋಗುವ ನೀರಿಗೆ ಹೆಚ್ಚುವರಿಯಾಗಿ ತಡೆಗೋಡೆ ನಿರ್ಮಿಸಿ, ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿರುವ ಭೋರುಕಾ ಜಲ ವಿದ್ಯುತ್ ಸಂಸ್ಥೆಯು, ಹಿನ್ನೀರಿನಲ್ಲಿ ಫಲವತ್ತಾದ ಭೂಮಿ ಕಳೆದುಕೊಂಡ ರೈತರಿಗೆ 12 ವರ್ಷಗಳಿಂದಲೂ ಪರಿಹಾರ ನೀಡದೇ ವಂಚಿಸುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಈಚೆಗೆ ಕಂಪೆನಿಯ ಅಧಿಕಾರಿಗೆ ಮನವಿ ಸಲ್ಲಿಸಿದ ಕೃಷ್ಣಪ್ಪಗೌಡ ಜಂಗಿನಗಡ್ಡಿ ಮಾತನಾಡಿ, ಕಂಪೆನಿಯ ತಡೆಗೋಡೆ ಹಿನ್ನೀರಿನಿಂದ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ವಿತರಣೆಯಲ್ಲಿ ಬಿಪಿಸಿಎಲ್ ಕಂಪೆನಿಯು ಚೆಲ್ಲಾಟವಾಡುತ್ತಿದೆ. 15 ದಿನಗಳಲ್ಲಿ ಸಮಸ್ಯೆ ಇತ್ಯರ್ಥವಾಗದೇ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದರು.
ಬಿಪಿಸಿಎಲ್ ಕಂಪೆನಿಯ ಜಲ ವಿದ್ಯುತ್ ಘಟಕ ಪ್ರಾರಂಭದ ಪೂರ್ವದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ, ಕಂದಾಯ ಇಲಾಖೆ ಹಾಗೂ ಬಿಪಿಸಿಎಲ್ ಕಂಪೆನಿಯ ಆಶ್ರಯದಲ್ಲಿ ವಿದ್ಯುತ್ ಘಟಕದ ಯೋಜನೆಗಾಗಿ ವಿವಿಧ ಕನ್ಸಲ್ಟಿಂಗ್ ಕಂಪೆನಿಗಳಿಂದ ಸರ್ವೆ ಪ್ರಕಾರ ಮುಳುಗಡೆಯಾದ ಜಮೀನುಗಳಿಗೆ ಭೂ ಪರಿಹಾರ ನೀಡಿಲ್ಲ. ಕಂಪೆನಿಯು ತಾರತಮ್ಯ ನೀತಿ ಅನುಸರಿಸುತ್ತಿದೆ. ಪರಿಶಿಷ್ಟ ಜಾತಿ, ಪಂಗಡದ ರೈತರ 71 ಎಕರೆ 31 ಗುಂಟೆಗೆ ಪರಿಹಾರ ನೀಡಲು ಹಿಂದೇಟು ಹಾಕುತ್ತಿದೆ. ಕೆಲ ರೈತರಿಗೆ ಪರಿಹಾರ ವಿತರಿಸಿ ಇನ್ನುಳಿದ ರೈತರಿಗೆ ಪರಿಹಾರ ನೀಡದೇ ಇರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.
ಹನೀಫ್ಸಾಬ್, ಬಾಲಯ್ಯ ಗುತ್ತೆದಾರ, ಶಾಂತಪ್ಪ ಮೇಸ್ತಕ, ಗದ್ದೆಪ್ಪ ಹಾಲಬಾವಿ, ಹಣಮಪ್ಪ ಹಾಲಬಾವಿ, ಅಂಬ್ರೇಶ, ಸೀತಪ್ಪ ಇದ್ದರು.