ಶಿವಮೊಗ್ಗ: ತಮಗೆ ತಿಳಿದ ನವೀನ ತಾಂತ್ರಿಕತೆಗಳನ್ನು ರೈತರಿಗೆ ತಿಳಿಯಪಡಿಸುವುದರಿಂದ ರೈತರು ಹೆಚ್ಚು ಇಳುವರಿ ಪಡೆದು, ಅಧಿಕ ಲಾಭ ಗಳಿಸಲು ಶ್ರಮಿಸಬೇಕು ಎಂದು ಜಿಲ್ಲಾ ತೋಟಗಾರಿಕಾ ಉಪ ನಿರ್ದೇಶಕ ಡಾ.ಎಂ. ವಿಶ್ವನಾಥ್, ತೋಟಗಾರಿಕಾ ಅಧಿಕಾರಿಗಳಿಗೆ ಸಲಹೆ ಮಾಡಿದರು.
ಇಲ್ಲಿಯ ನವಿಲೆ ಕೃಷಿ ವಿಜ್ಞಾನ ಕೇಂದ್ರ, `ತೋಟಗಾರಿಕಾ ಬೆಳೆಗಳಲ್ಲಿ ನವೀನ ತಾಂತ್ರಿಕತೆಗಳು~ ಕುರಿತು ಜಿಲ್ಲೆಯ ತೋಟಗಾರಿಕಾ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಎರಡು ದಿನಗಳ ತರಬೇತಿ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸಹ ಇಸ್ರೇಲ್ ತಂತ್ರಜ್ಞಾನ ಅಳವಡಿಸಿ, ಅರ್ಥಿಕ ಕೃಷಿಯ ಕಡೆಗೆ ಮುನ್ನಡೆಯಲು ಸಾಕಷ್ಟು ಅವಕಾಶಗಳಿವೆ ಎಂದು ಅವರು ತಿಳಿಸಿದರು.
ತೋಟಗಾರಿಕಾ ಬೆಳೆಗಳಲ್ಲಿ ವಾರ್ಷಿಕ ಬೆಳವಣಿಗೆ ದರ ಶೇ. 7.8ರಷ್ಟು ಇದ್ದುದ್ದರಿಂದ 12ನೇ ಪಂಚವಾರ್ಷಿಕ ಯೋಜನೆಯಲ್ಲಿ ತೋಟಗಾರಿಕಾ ಬೆಳೆಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ಮಹಾವಿದ್ಯಾಲಯದ ಪ್ರಭಾರ ಡೀನ್ (ಕೃಷಿ) ಡಾ.ಎ.ಎಸ್. ಕುಮಾರಸ್ವಾಮಿ ಮಾತನಾಡಿ, ಯಾವುದೇ ತಂತ್ರಜ್ಞಾನವನ್ನು ರೈತರಿಗೆ ತಿಳಿಯಪಡಿಸುವುದಕ್ಕಿಂತ ಮೊದಲು ತಂತ್ರಜ್ಞಾನದ ಪುನರಾವರ್ತನೆ, ಲಾಭ, ನಷ್ಟ ಹಾಗೂ ಅಳವಡಿಕೆ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ, ರೈತರಿಗೆ ತಿಳಿಯಪಡಿಸಬೇಕು ಎಂದು ಹೇಳಿದರು.
ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ.ಬಿ.ಸಿ. ಹನುಮಂತಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು.
ವಿಷಯ ತಜ್ಞ (ತೋಟಗಾರಿಕೆ) ಡಾ.ನಾಗರಾಜಪ್ಪ ಅಡಿವಪ್ಪರ್ ಕಾರ್ಯಕ್ರಮ ನಿರೂಪಿಸಿದರು. ವಿಷಯ ತಜ್ಞ (ಪಶುವಿಜ್ಞಾನ) ಡಾ.ಎಂ. ಅಶೋಕ್ ವಂದಿಸಿದರು.