ಬೆಂಗಳೂರು: ರೈತರಿಗೆ ಬಡ್ಡಿರಹಿತ ಸಾಲ ನೀಡುವಂತೆ ಬಿಜೆಪಿಯ ಡಿ.ಎನ್.ಜೀವರಾಜ್ ಅವರು ಶುಕ್ರವಾರ ವಿಧಾನ ಸಭೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸದ್ಯ ಶೇ 1ರ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ. ಇದನ್ನು ತೆಗೆದು ಹಾಕಿ ಬಡ್ಡಿರಹಿತ ಸಾಲ ನೀಡಬೇಕು. ಇದರಿಂದ ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗುವುದಿಲ್ಲ ಎಂಬುದಾಗಿ ಹೇಳಿದರು.
ಎಲ್ಲ ಸೌಲಭ್ಯಗಳನ್ನು ಬಿಜೆಪಿ ಸರ್ಕಾರ ನೀಡಿದೆ. ಆದರೆ ಅನುಷ್ಠಾನದಲ್ಲಿ ಕೆಲವೊಂದು ಲೋಪಗಳು ಇರಬಹುದು. ಅಧಿಕಾರಿಗಳನ್ನು ಎಚ್ಚರಿಸಿ ಅವುಗಳನ್ನು ಸರಿಪಡಿಸುವ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕಾಗಿದೆ ಎಂದರು.
ಸಾವಯವ ಕೃಷಿಗೆ ಒತ್ತು, ಸಂಧ್ಯಾಸುರಕ್ಷಾ, ಅಂಗವಿಕಲರಿಗೆ ಮಾಸಾಶನ ನೀಡುವುದು ಸೇರಿದಂತೆ ಹತ್ತು ಹಲವು ಸೌಲಭ್ಯಗಳನ್ನು ಬಿಜೆಪಿ ಸರ್ಕಾರ ಕಲ್ಪಿಸಿಕೊಟ್ಟಿದೆ. ಸರ್ಕಾರದ ಕಾರ್ಯವೈಖರಿಯನ್ನು ಸದಾ ಎಕ್ಸ್ರೇ ಕಣ್ಣಿನಿಂದ ನೋಡುವ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಸಹ ಸರ್ಕಾರದ ಸಾಧನೆಯನ್ನು ಕೊಂಡಾಡಿದ್ದಾರೆ ಎಂಬುದಾಗಿ ಹೇಳಿದರು.