ರಾಯಚೂರು: ರೈತರ ಭೂಮಿ ವಾಪಸ್ ನೀಡಬೇಕು ಎಂಬ ಮನವಿಯ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಒಪ್ಪಂದದ ಪ್ರಕಾರ ಪಡೆದುಕೊಂಡ ರೈತರ 125 ಎಕರೆ ಭೂಮಿಯನ್ನು ರೈತರಿಗೆ ಮುಂದಿನ ಸಮಿತಿಯ ಸಭೆಯಲ್ಲಿ ತೀರ್ಮಾನ ಕೈಗೊಂಡು ಭೂಮಿ ವಾಪಸ್ ನೀಡುವ ಬಗ್ಗೆ ಸರ್ಕಾರಕ್ಕೆ ಮಾಹಿತಿಯೊಂದಿಗೆ ವರದಿ ಮಾಡಲಾಗುವುದು ಎಂದು ಭರವಸೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಆರ್.ತಿಮ್ಮಯ್ಯ ಹೇಳಿದರು.
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭಾಭವನದಲ್ಲಿ ರೈತ ಸಮುದಾಯದಿಂದ ಸೋಮವಾರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಎಪಿಎಂಸಿ ಉಪಾಧ್ಯಕ್ಷ ಬಾಬುರಾವ್ ಹಾಗೂ ಸದಸ್ಯರಿಗೆ ರೈತ ಸಮುದಾಯದಿಂದ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ನೇತೃತ್ವವನ್ನು ಮಾಜಿ ಶಾಸಕ ಎ.ಪಾಪಾರೆಡ್ಡಿ ವಹಿಸಿದ್ದರು. ಅಧ್ಯಕ್ಷತೆಯನ್ನು ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ.ಬಸವರಾಜರೆಡ್ಡಿ, ನಗರಸಭೆ ಉಪಾಧ್ಯಕ್ಷ ಯು.ದೊಡ್ಡಮಲ್ಲೇಶಪ್ಪ, ಎಪಿಎಂಸಿ ನಿರ್ದೇಶಕ ಚನ್ನಪ್ಪ ಹಾಗೂ ಎನ್.ಲಾಲಪ್ಪ, ಎಂ.ನಾಗಿರೆಡ್ಡಿ, ನಗರಸಭೆ ಸದಸ್ಯರಾದ ಟಿ.ಶ್ರೀನಿವಾಸರೆಡ್ಡಿ, ಎನ್.ಶ್ರೀನಿವಾಸರೆಡ್ಡಿ, ಕೆ.ನಲ್ಲಾರೆಡ್ಡಿ, ಹಾಗೂ ಕೆ.ರಾಜೇಂದ್ರರೆಡ್ಡಿ ಉಪಸ್ಥಿತರಿದ್ದರು. ಕೆ.ರವಿ ನಿರೂಪಿಸಿದರು.