ರಾಯಚೂರು: ಕೃಷಿ ವಿಶ್ವವಿದ್ಯಾಲಯದಲ್ಲಿ ರೂಪಗೊಳ್ಳುವ ಕೃಷಿ ತಂತ್ರಜ್ಞಾನ, ಸಂಶೋಧನೆ ಮತ್ತು ಆವಿಷ್ಕಾರಗಳು ರೈತರಿಗೆ ಸಕಾಲಕ್ಕೆ ದೊರಕಬೇಕು. ಈ ದಿಶೆಯಲ್ಲಿ ಕೃಷಿ ವಿಜ್ಞಾನ ಕೇಂದ್ರಗಳ ಪಾತ್ರ ಮಹತ್ವದ್ದಾಗಿದೆ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ವಿ. ಪಾಟೀಲ್ ಹೇಳಿದರು.
ಇಲ್ಲಿನ ಕೃಷಿ ವಿ.ವಿ. ಆವರಣದಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಕೆವಿಕೆ) ಗುರುವಾರ ನಡೆದ ಕೆವಿಕೆಯ 201-11ನೇ ಸಾಲಿನ ವಾರ್ಷಿಕ ಪರಿಶೀಲನೆ ಹಾಗೂ 2012-13ರ ಕ್ರಿಯಾಯೋಜನೆ ತಯಾರಿ ಕುರಿತ ಕೆವಿಕೆ-ವಲಯ 8ರ ಸಭೆಯಲ್ಲಿ ಮಾತನಾಡಿದರು.
ಮಾರುಕಟ್ಟೆಯ ಬಗ್ಗೆ ಸಂಪೂರ್ಣ ಜ್ಞಾನ ಹೊಂದಲು ರೈತ ಬಾಂಧವರಲ್ಲಿ ಅರಿವು ಮೂಡಿಸಬೇಕಿದೆ. ಮುಂಬರುವ ದಿನಗಳಲ್ಲಿ ರೈತರೊಂದಿಗೆ ನೇರ ಸಂಪರ್ಕ ಹೊಂದಿ ರೈತರು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕೆವಿಕೆ ವಲಯ ಯೋಜನಾ ನಿರ್ದೇಶನಾಲಯದ ನಿರ್ದೇಶಕ ಡಾ.ಎಸ್.ಪ್ರಭುಕುಮಾರ ಮಾತನಾಡಿ, ರೈತರನ್ನು ವಾಣಿಜ್ಯೋದ್ಯಮಿ ವಿಜ್ಞಾನಿಗಳನ್ನಾಗಿ ರೂಪಿಸುವ ಪ್ರಯತ್ನ ಆಗಬೇಕು ಎಂದರು.
ವಲಯ ನಿರ್ದೇಶನಾಲಯ ಹಿರಿಯ ವಿಜ್ಞಾನಿ ಡಾ.ಚಂದ್ರೇಗೌಡ, ರಾಯಚೂರು ಕೃಷಿ ವಿ.ವಿ. ವಿಸ್ತರಣಾ ನಿರ್ದೇಶಕ ಎಸ್.ಎನ್.ಹಂಚಿನಾಳ, ಬೆಂಗಳೂರು ಕೃಷಿ ವಿ.ವಿ. ವಿಸ್ತರಣಾ ನಿರ್ದೇಶಕ ಆರ್.ಎಸ್ ಕುಲಕರ್ಣಿ, ಬೀದರ್ ಪಶು ವಿವಿಯ ವಿಸ್ತರಣಾ ನಿರ್ದೇಶಕ ಕೆ.ಎನ್.ಪ್ರಭುದೇವ್, ಧಾರವಾಡ ಕೃಷಿ ವಿವಿಯ ವಿಸ್ತರಣಾ ನಿರ್ದೇಶಕ ಡಾ.ಎಲ್.ಕೆ.ಕೃಷ್ಣಾ ನಾಯ್ಕ, ಕೃಷಿ ವಿ.ವಿ. ಅಧಿಕಾರಿಗಳು, ಕೆವಿಕೆ ವಿಜ್ಞಾನಿಗಳು ಇದ್ದರು.
ಮೆಣಸಿನಕಾಯಿ ಆಧುನಿಕ ಪದ್ಧತಿ, ಕುರಿ ಮತ್ತು ಮೇಕೆ ಸಾಕಾಣಿಕೆ ತಾಂತ್ರಿಕತೆ ವಿಧಾನಗಳು ಎಂಬ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.