ಸಿದ್ದಾಪುರ: ‘ರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕಾದರೆ ರೈತರು ಸಂಘಟಿತರಾಗಬೇಕು’ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಪಟ್ಟಣದ ಸಿ.ಬಿ.ಪಂಡಿತ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಹಳ್ಳಿಗಳ ಜನರು ಕೃಷಿಯಿಂದ ದೂರವಾಗುತ್ತಿದ್ದಾರೆ. ಕೃಷಿಯ ಸಹವಾಸ ಬೇಡ ಎಂದು ಗ್ರಾಮೀಣ ಭಾಗದ ಯುವ ಜನತೆ ನಗರದತ್ತ ಸಾಗುತ್ತಿದ್ದಾರೆ. ಕೃಷಿ ಬದುಕು ಕೃಷಿಕರಿಗೆ ವಿಶ್ವಾಸ ಮೂಡಿಸಬೇಕು.ಆದರೆ ಇಂದು ರೈತರು ಹಲವು ಸಮಸ್ಯೆಗಳ ನಡುವೆ ಜೀವನ ನಡೆಸುತ್ತಿದ್ದಾರೆ. ಈ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಹಾವಳಿ ಹಾಗೂ ಪ್ರಕೃತಿ ವಿಕೋಪದಿಂದ ಬೆಳೆದ ಬೆಳೆ ನಾಶವಾಗುತ್ತಿದೆ. ಇದಕ್ಕೆ ವೈಜ್ಞಾನಿಕ ಪರಿಹಾರವನ್ನು ಸರ್ಕಾರ ನೀಡಬೇಕು’ ಎಂದರು.
ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿ ಕಾರಿ ಶ್ರೀಧರ ಭಟ್ಟ, ತಹಶೀಲ್ದಾರ್ ಸುಭಾಷ್ ಫುಲಾರಿ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಮಹಾಬಲೇಶ್ವರ ಬಿ.ಎಸ್. ಉಪಸ್ಥಿತರಿದ್ದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಮಾದೇವಿ ರಾಮ ಗೌಡ ಅಧ್ಯಕ್ಷತೆ ವಹಿಸಿದ್ದರು.
ತಾಲ್ಲೂಕಿನಲ್ಲಿ ಎಕರೆಗೆ ಅತಿ ಹೆಚ್ಚು ಭತ್ತ ಬೆಳೆದ ಗೋಪಾಲ ಹೆಗಡೆ ಹುಲಿಮನೆ(ಪ್ರಥಮ),ಮಾರಿ ಕೆರಿಯಾ (ದ್ವಿತೀಯ)ಹಾಗೂ ಸುಮಿತ್ರಾ ಗೌಡ (ತೃತೀಯ) ಅವರಿಗೆ ಬಹುಮಾನ ನೀಡಲಾಯಿತು.ಗೋಪಾಲ ಹೆಗಡೆ ಹುಲಿಮನೆ ಹಾಗೂ ರವಿಲೋಚನ ಮಡಗಾಂವ್ಕರ್ ಅನಿಸಿಕೆ ವ್ಯಕ್ತಪಡಿಸಿದರು.
ಸಹಾಯಕ ಕೃಷಿ ನಿರ್ದೇಶಕ ಶಂಕರ ಹೆಗಡೆ ಸ್ವಾಗತಿಸಿದರು. ಜಿ.ಎಸ್.ಪ್ರಶಾಂತ ಕಾರ್ಯಕ್ರಮ ನಿರ್ವಹಿಸಿದರು.