ಚಾಮರಾಜನಗರ: `ತಾಲ್ಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಜಯಾ ಬ್ಯಾಂಕ್ನ ಮೂರು ಶಾಖೆಗಳಿಂದಲೂ ಗ್ರಾಹಕರಿಗೆ ಒಟ್ಟು 1.50 ಕೋಟಿ ರೂ ಸಾಲ ಸೌಲಭ್ಯ ಕಲ್ಪಿಸಲಾಗಿದೆ~ ಎಂದು ಮೈಸೂರಿನ ವಿಜಯಾ ಬ್ಯಾಂಕ್ನ ಪ್ರಾದೇಶಿಕ ಕಚೇರಿ ಮುಖ್ಯಸ್ಥ ಜಯರಾಮಶೆಟ್ಟಿ ಹೇಳಿದರು.
ತಾಲ್ಲೂಕಿನ ಸುವರ್ಣಾವತಿ ಜಲಾಶ ಯದ ಪ್ರವಾಸಿ ಮಂದಿರದ ಮುಂಭಾಗ ಈಚೆಗೆ ನಡೆದ ಸಮಾರಂಭದಲ್ಲಿ ರೈತರು, ವ್ಯಾಪಾರಸ್ಥರು ಹಾಗೂ ಮಹಿಳಾ ಸ್ವಸಹಾಯ ಸಂಘಗಳಿಗೆ ಕೃಷಿಯೇತರ ಸಾಲದ ಚೆಕ್ ವಿತರಿಸಿ ಅವರು ಮಾತನಾಡಿದರು.
ರೈತರು ಮತ್ತು ಕೃಷಿಯೇತರ ಚಟು ವಟಿಕೆಗಳಲ್ಲಿ ತೊಡಗಿಸಿ ಕೊಂಡಿರುವ ಗ್ರಾಹಕರ ಅಭಿವೃದ್ಧಿಗೆ ಸಾಲ ಮಂಜೂರು ಮಾಡಲಾಗಿದೆ. ಫಲಾ ನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದ ಅವರು, ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಬ್ಯಾಂಕ್ ಬದ್ಧವಾಗಿದೆ. ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಕೃಷಿ ತಾಂತ್ರಿಕ ಪರಿಕರ ಖರೀದಿಗೆ ರಿಯಾಯಿತಿ ದರ ದಲ್ಲಿ ಸಾಲ ನೀಡಲಾಗುತ್ತಿದೆ ಎಂದರು.
ಮಹಿಳಾ ಸ್ವಸಹಾಯ ಸಂಘಗಳು ಸ್ವಾವಲಂಬನೆ ಸಾಧಿಸಲು ಆರ್ಥಿಕ ನೆರವು ನೀಡಲಾಗುತ್ತಿದೆ. ಗುಡಿ ಕೈಗಾರಿಕೆಗಳಲ್ಲಿ ತೊಡಗಿಸಿಕೊಂಡು ಮಹಿಳೆಯರು ಅಭಿವೃದ್ಧಿ ಹೊಂದಬೇಕು. ಬ್ಯಾಂಕ್ನಿಂದ ಪಡೆದ ಸಾಲವನ್ನು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಬೇಕು. ಸಾಲ ಮನ್ನಾವಾಗುತ್ತದೆ ಎಂಬ ಭ್ರಮೆಯಿಂದ ಹೊರಬರಬೇಕು. ಸುಸ್ತಿಬಡ್ಡಿ ವಿಧಿಸುವ ಮೊದಲೇ ಸಾಲ ಮರುಪಾವತಿ ಮಾಡಿ ಬ್ಯಾಂಕ್ನ ಅಭಿವೃದ್ಧಿಗೂ ಸಹಕಾರ ನೀಡಬೇಕು ಎಂದು ಹೇಳಿದರು.
ಮೈಮುಲ್ ನಿರ್ದೇಶಕ ಎಚ್.ಎಸ್. ಬಸವರಾಜು ಮಾತನಾಡಿ, ಜಿಲ್ಲೆ ಬರಪೀಡಿತ ಪ್ರದೇಶವೆಂದು ಘೋಷಣೆ ಯಾಗಿದೆ. ಅಂತರ್ಜಲಮಟ್ಟ ಕುಸಿತ ದಿಂದ ಕೃಷಿ ಪಂಪ್ಸೆಟ್ಗಳು ಸ್ಥಗಿತ ಗೊಂಡಿವೆ. ಹೀಗಾಗಿ, ಬ್ಯಾಂಕ್ನಿಂದ ಸಾಲ ವಸೂಲಿ ಮಾಡುವಾಗ ಈ ಅಂಶ ಪರಿಗಣಿಸಿ ಮರುಪಾವತಿಗೆ ಕಾಲಾವಕಾಶ ಕಲ್ಪಿಸಬೇಕು ಎಂದು ಕೋರಿದರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರಂಗಸ್ವಾಮಯ್ಯ, ವ್ಯವಸ್ಥಾಪಕರಾದ ವೈ.ಆರ್. ದಾಮ್ಲೆ, ಗಂಗಾಧರ್, ಚಂದ್ರಶೇಖರ್, ಭಾಸ್ಕರ್ ರೆಡ್ಡಿ ಇದ್ದರು.