ಮುಂಡರಗಿ: ಸಕ್ಕರೆ ವಿತರಿಸುವ ಕುರಿತಂತೆ ಮೃಡಗಿರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ, ರೈತರು ಮತ್ತು ಷೇರುದಾರರ ನಡುವೆ ತೀವ್ರ ಗಲಾಟೆ ಸಂಭವಿಸಿ, ಒಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಗಂಗಾಪುರ ಗ್ರಾಮದಲ್ಲಿರುವ ಮೃಡಗಿರಿ ಸಹಕಾರಿ ಸಕ್ಕರೆ ಭಾನುವಾರ ನಡೆದಿದೆ. ಗಾಯಾಳುವನ್ನು ಕಲಕೇರಿ ಗ್ರಾಮದ ಈಶ್ವರ ಸಜ್ಜನರ ಎಂದು ಗುರುತಿಸಲಾಗಿದೆ.
ಭಾನುವಾರ ಮೃಡಗಿರಿ ಸಹಕಾರಿ ಸಕ್ಕರೆ ಕಾರ್ಖಾನೆ ವಾರ್ಷಿಕ ಮಹಾಸಭೆಯನ್ನು ಕಾರ್ಖಾನೆ ಆವರಣದಲ್ಲಿ ಏರ್ಪಡಿಸಲಾಗಿತ್ತು. ಸಭೆ ಪ್ರಾರಂಭವಾಗುತ್ತಿದ್ದಂತೆ ರೈತರು ತಮಗೆ ಈ ಹಿಂದೆ ತಿಳಿಸಿದಂತೆ 10 ಕೆಜಿ ಸಕ್ಕರೆ ನೀಡಿ ಎಂದು ಕೇಳಿಕೊಂಡರು. ಹಮ್ಮಿಗಿ ಜಿಲ್ಲಾ ಪಂಚಾಯಿತಿ ಉಪಚುನಾವಣೆ ನಡೆಯುತ್ತಿರುವು ದರಿಂದ ಸಕ್ಕರೆ ವಿತರಣೆಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುತ್ತದೆ ಎಂದು ಆಡಳಿತ ಮಂಡಳಿಯವರು ಸಕ್ಕರೆ ವಿತರಿಸುವುದಿಲ್ಲ ಎಂದು ತಿಳಿಸಿದರು. ಇದರಿಂದ ರೈತರು ಮತ್ತು ಆಡಳಿತ ಮಂಡಳಿಯ ನಡುವೆ ವಾಗ್ವಾದ ನಡೆಯಿತು.
ಕಾರ್ಖಾನೆ ಷೇರುದಾರಿಗೆ ಪ್ರತಿವರ್ಷ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ 10 ಕೆಜಿ ಸಕ್ಕರೆ ನೀಡುವುದಾಗಿ ಆಡಳಿತ ಮಂಡಳಿಯವರು ಈ ಹಿಂದೆ ತಿಳಿಸಿದ್ದರು. ಆದರೆ ಕಳೆದ ವರ್ಷ ನಮಗೆ ಸಕ್ಕರೆ ನೀಡಲಿಲ್ಲ. ಈ ವರ್ಷವೂ ಮತ್ತೊಂದು ಕಾರಣ ಹೇಳುತ್ತಿದ್ದಾರೆ ಎಂದು ರೈತರು ದೂರಿದರು. ಕೋಪಗೊಂಡ ಷೇರುದಾರರು ಮೃಡಗಿರಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ವಿರುದ್ಧ ಆಕ್ರೋಶಗೊಂಡು ಗಲಾಟೆ ನಡೆಸಿದರು ಎಂದು ತಿಳಿದುಬಂದಿದೆ. ಇದರಿಂದ ಬೇಸರಗೊಂಡ ಎಸ್.ಎಸ್.ಪಾಟೀಲರು ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಅಲ್ಲಿಂದ ಹೋಗಲು ಮುಂದಾದಾಗ ರೈತರು ಅವರನ್ನು ತಡೆಯಲು ಪ್ರಯತ್ನಿಸಿದರು.
ಬೇಲೂರು, ನವಲಗುಂದ, ನರಗುಂದ, ರೋಣ ಮೊದಲಾದ ಭಾಗಗಳಿಂದ ರೈತರು ಬಂದಿದ್ದರು. ಮೊದಲೆ ನೀತಿ ಸಂಹಿತೆ ಇರುವ ವಿಷಯ ತಿಳಿಸಿದ್ದರೆ ಸಭೆಗೆ ಬರುತ್ತಿರಲಿಲ್ಲ. ಈ ಭಾಗದಲ್ಲಿ ಉಪ ಚುನಾವಣೆ ಇರುವ ವಿಷಯ ನಿಮಗೆ ತಿಳಿದಿದ್ದರಿಂದ ಸಭೆ ನಡೆಸಲು ಮತ್ತೊಂದು ದಿನಾಂಕ ನಿಗದಿ ಮಾಡಬೇಕಿತ್ತು ಎಂದು ರೈತರು ಆಗ್ರಹಿಸಿದರು. ಜಿಲ್ಲಾ ಉಪವಿಭಾಗಾಧಿಕಾರಿ ಐ.ಜೆ.ಗದ್ದಿಹಾಳ, ತಹಶೀಲ್ದಾರ್ ಎಸ್.ಆರ್. ಸಿರಕೋಳ, ಸಿಪಿಐ ಸುನಿಲ್ ಸವದಿ ಸ್ಥಳಕ್ಕೆ ಭೇಟಿ ನೀಡಿ ರೈತರ ಮನ ಒಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.