ಸಾಹಿಬ್ ಗಂಜ್/ ಗುವಾಹಟಿ, (ಪಿಟಿಐ): ಇಲ್ಲಿಂದ 25 ಕಿ.ಮೀ ದೂರದ ಜಾರ್ಖಂಡ್ ನ ಸಾಹಿಬ್ ಗಂಜ್ ನಲ್ಲಿ ನಿಂತಿದ್ದ ಸರಕು ಸಾಗಾಣಿಕಾ ರೈಲಿಗೆ ದಿಬ್ರೂಗಢ್ ದಿಂದ ದೆಹಲಿಯತ್ತ ಹೊರಟಿದ್ದ ಭ್ರಹ್ಮಪುತ್ರ ಮೇಲ್ ರೈಲು ಬುಧವಾರ ನಸುಕಿನಲ್ಲಿ ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟಿದ್ದಾರೆ, ಜೊತೆಗೆ ಮಗುವೂ ಸೇರಿದಂತೆ ಒಂಬತ್ತು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಪೂರ್ವ ರೈಲ್ವೆಯ ಮಾಲ್ದಾ ವಿಭಾಗದ ಕರೋನ್ಪುರಟೋ ರೈಲು ನಿಲ್ದಾಣದಲ್ಲಿ ಹಾಯ್ದುಹೋಗುವಾಗ, ಹಳಿಯ ಮೇಲೆ ನಿಂತಿದ್ದ ಸರಕು ಸಾಗಾಣಿಕಾ ರೈಲು ಹಿಂದಕ್ಕೆ ಚಲಿಸತೊಡಗಿತು. ರಭಸದಿಂದ ಓಡುತ್ತಿದ್ದ ಭ್ರಹ್ಮಪುತ್ರ ಮೇಲ್ ರೈಲು ಡಿಕ್ಕಿ ಹೊಡೆದಾಗ, ಸರಕು ಸಾಗಾಣಿಕಾ ರೈಲಿನ ಗಾರ್ಡ್ ಬೋಗಿಯು ಎಸ್ 9 ಬೊಗಿಯನ್ನು ಹತ್ತಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಅಪಘಾತದಲ್ಲಿನ ಸಾವಿಗೆ ಕಂಬಿನಿ ಮಿಡಿದಿರುವ ರೈಲ್ವೆ ಸಚಿವ ದಿನೇಶ್ ತ್ರವೇದಿ ಅವರು, ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಜೊತೆಗೆ ತೀವ್ರವಾಗಿ ಗಾಯಗೊಂಡವರಿಗೆ ತಲಾ 50,000 ರೂಪಾಯಿ ಮತ್ತು ಸಣ್ಣಪುಟ್ಟ ಗಾಯಗಳಾಗಿರುವವರಿಗೆ 10,000 ರೂಪಾಯಿ ಘೋಷಿಸಿದ್ದಾರೆ.