ಗದಗ: ನೌಕರಿ ಕಾಯಂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣ ಅಂಚೆ ನೌಕರರು ನಡೆಸುತ್ತಿರುವ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದ್ದು, ಶನಿವಾರ ರೈಲು ತಡೆದು ಪ್ರತಿಭಟನೆ ನಡೆಸಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣ ದಲ್ಲಿರುವ ಅಂಚೆ ಕಚೇರಿಯಿಂದ ರೈಲು ನಿಲ್ದಾಣದವರೆಗೆ ಮಹಿಳೆಯರು ಸೇರಿದಂತೆ ನೂರಾರು ಮಂದಿ ವಿವಿಧ ನಾಮಫಲಕದೊಂದಿಗೆ ಮೆರವಣಿ ಗೆಯಲ್ಲಿ ರೈಲು ನಿಲ್ದಾಣಕ್ಕೆ ಆಗಮಿಸಿದರು. ಕಾರ್ಮಿಕ ವಿರೋಧಿ ನೀತಿಗೆ ಧಿಕ್ಕಾರ, ಕಾರ್ಮಿಕರ ಹೋರಾಟಕ್ಕೆ ಜಯವಾಗಲಿ ಎಂಬ ಘೋಷಣೆಗಳನ್ನು ಮೊಳಗಿಸಿದರು.
ಹುಬ್ಬಳ್ಳಿಯಿಂದ ಸೊಲ್ಲಾಪುರ ಮಾರ್ಗದಲ್ಲಿ ಸಂಚರಿಸುವ ರೈಲನ್ನು ಐದು ನಿಮಿಷ ತಡೆದು ಪ್ರತಿಭಟನೆ ನಡೆಸಿದರು. ಕೂಡಲೇ ಸರ್ಕಾರ ಬೇಡಿಕೆ ಈಡೇರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು. ಅನುಕಂಪ ಆಧಾರ ನೇಮಕಾತಿಯ ಆದೇಶವನ್ನು ಸಡಿಲಗೊಳಿಸಬೇಕು, ನೌಕರರನ್ನು ಕಾಯಂಗೊಳಿಸಬೇಕು, ವೈದ್ಯಕೀಯ ಭತ್ಯೆ ಹೆಚ್ಚಳ ಮಾಡಬೇಕು ಹಾಗೂ ವರ್ಗಾವಣೆ ನೀತಿಯಲ್ಲಿ ಬದಲಾವಣೆ ತರಬೇಕು ಎಂದು ಒತ್ತಾಯಿಸಿದರು.
ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ, ಮೆರವಣಿಗೆ, ಸಂಸದರ ಕಚೇರಿಗೆ ಮುತ್ತಿಗೆ ಸೇರಿದಂತೆ ವಿವಿಧ ಹೋರಾಟಗಳನ್ನು ಗ್ರಾಮೀಣ ಅಂಚೆ ನೌಕರರು ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಸಂಘದ ಮುಖಂಡರಾದ ಕೆ.ಎಸ್.ಬ್ಯಾಳಿ, ರಾಜು ಪಾಟೀಲ, ಟಿ.ಸಿ.ಹಿರೇಹಾಳ, ಶಾರದ ನರಗುಂದ, ಸುಧಾ ಬ್ಯಾಳಿ, ದೊಡ್ಡಮನಿ, ಕುಂಬಾರ ಭಾಗವಹಿಸಿದ್ದರು.