ಚಿಕ್ಕಬಳ್ಳಾಪುರ: ರೈಲು ನಿಲ್ದಾಣವನ್ನು ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಬಾರದು, ನಿಲ್ದಾಣಕ್ಕೆ ಮೂಲಸೌರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ರೈಲ್ವೆ ಹೋರಾಟ ಸಮಿತಿ ಸದಸ್ಯರು ಸೋಮವಾರ ರೈಲು ತಡೆದು ಪ್ರತಿಭಟನೆ ನಡೆಸಿದರು.
ಚಿಕ್ಕಬಳ್ಳಾಪುರ ರೈಲು ನಿಲ್ದಾಣದಲ್ಲಿ ಬೆಂಗಳೂರು ಪ್ಯಾಸೆಂಜರ್ ರೈಲನ್ನು ತಡೆದು ಪ್ರತಿಭಟನೆ ನಡೆಸಿದ ಅವರು, ‘ಪ್ರಯಾಣಿಕರಿಗೆ ಅನುಕೂಲವಾಗುವ ಹಾಗೆ ರೈಲು ನಿಲ್ದಾಣ ಇರಬೇಕೆ ಹೊರತು ಜನರು ಮತ್ತು ನಗರಪ್ರದೇಶದಿಂದ ದೂರ ಇರಬಾರದು’ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ರೈಲ್ವೆ ಹೋರಾಟ ಸಮಿತಿ ಉಪಾಧ್ಯಕ್ಷ ಯಲುವಹಳ್ಳಿ ರಮೇಶ್ ಮಾತನಾಡಿ, ‘ರೈಲು ನಿಲ್ದಾಣವನ್ನು ಸ್ಥಳಾಂತರಿಸುವಂತೆ ಯಾರೂ ಕೋರುತ್ತಿಲ್ಲ. ಯಾರೂ ಒತ್ತಡವನ್ನೂ ಸಹ ಹೇರಿಲ್ಲ.ನಿಲ್ದಾಣವನ್ನು ಅಭಿವೃದ್ಧಿಪಡಿಸುವುದರ ಬದಲು ಅದನ್ನು ಸ್ಥಳಾಂತರಗೊಳಿಸಲು ಕೆಲವರು ಯತ್ನ ನಡೆಸಿದ್ದಾರೆ’ ಎಂದು ಆರೋಪಿಸಿದರು.
‘ರೈಲು ನಿಲ್ದಾಣದಲ್ಲಿ ಮೂಲಸೌಕರ್ಯಗಳಿಲ್ಲ. ಪ್ರಯಾಣಿಕರು ಸೇರಿದಂತೆ ರೈಲ್ವೆ ಸಿಬ್ಬಂದಿಗಳಿಗೂ ಕುಡಿಯುವ ನೀರಿನ ಸೌಕರ್ಯ, ಶೌಚಾಲಯವಿಲ್ಲ. ಪ್ರತಿ ವರ್ಷ ರೈಲ್ವೆ ಬಜೆಟ್ ಸಂದರ್ಭದಲ್ಲಿ ನಿಲ್ದಾಣದ ಅಭಿವೃದ್ಧಿಯ ಬಗ್ಗೆ ಭರವಸೆ ನೀಡಲಾಗುತ್ತದೆ. ಆದರೆ ಭರವಸೆಗಳು ಮಾತ್ರ ಈಡೇರುವುದಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ರೈಲ್ವೆ ಹೋರಾಟ ಸಮಿತಿ ಸದಸ್ಯರಾದ ವೆಂಕಟಾಚಲರಾಜು, ಮಹಮ್ಮದ್, ಸುಜಾತಾ ಭೂಷಣ್, ಪ್ರೇಮಲೀಲಾ ವೆಂಕಟೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.