ಕಾರವಾರ: ಯಶವಂತಪುರ-ಕಾರವಾರ ರಾತ್ರಿ ರೈಲು ಬುಧವಾರ ಯಶವಂತಪುರದಿಂದ ಸಂಚಾರ ಆರಂಭಿಸಿದ್ದು, ಗುರುವಾರ ಮಧ್ಯಾಹ್ನ 2.50ರ ಸುಮಾರಿಗೆ ರೈಲು ಕಾರವಾರ ನಿಲ್ದಾಣಕ್ಕೆ ಆಗಮಿಸಿತು.
ಜಿಲ್ಲೆಯಾದ್ಯಂತ ಕನ್ನಡ ಪರ ಸಂಘಟನೆಗಳ ಮತ್ತು ರೈಲ್ವೆ ಹೋರಾಟ ಸಮಿತಿ ಕಾರ್ಯಕರ್ತರು ನೂತನ ರೈಲಿಗೆ ಅದ್ದೂರಿ ಸ್ವಾಗತ ನೀಡಿದರು. ಜಿಲ್ಲಾ ಕೇಂದ್ರ ಸ್ಥಾನದಿಂದ ರಾಜಧಾನಿಗೆ ರೈಲು ಸಂಪರ್ಕ ಆರಂಭವಾಗಿದ್ದರಿಂದ ಎನ್ಎಸ್ಯುಐ ಕಾರ್ಯಕರ್ತರು ಇಲ್ಲಿಯ ಶಿರವಾಡ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸಿಹಿ ಹಂಚಿದರು.
ಒಟ್ಟು 13 ಬೋಗಿಗಳು ರೈಲಿನಲ್ಲಿದ್ದು ಮೂರು ಸಾಮಾನ್ಯ, ಎಂಟು ಸ್ಲೀಪರ್, ತಲಾ ಒಂದು ಟೂ ಹಾಗೂ ತ್ರಿ ಟೈರ್ ಎಸಿ ಬೋಗಿಗಳನ್ನು ರೈಲು ಒಳಗೊಂಡಿದೆ. ರಾತ್ರಿ 8.30ಕ್ಕೆ ಯಶಂತಪುರದಿಂದ ಹೊರಡುವ ರೈಲು ಬೆಂಗಳೂರು, ಮಂಡ್ಯ, ಮೈಸೂರು, ಹಾಸನ, ಸುಬಹ್ಮಣ್ಯ, ಪುತ್ತೂರು, ಮಂಗಳೂರು ಮಾರ್ಗವಾಗಿ ಮಧ್ಯಾಹ್ನ 2ಕ್ಕೆ ಕಾರವಾರ ತಲುಪಲಿದೆ.
ಕಾರವಾರ ತಲುಪಿದ ರೈಲು ಪುನಃ 2.40ಕ್ಕೆ ಹೊರಟು ಮಾರನೇ ದಿನ 8.30ಕ್ಕೆ ಯಶವಂತಪುರ ತಲುಪಲಿದೆ. ಕಾರವಾರಕ್ಕೆ ಬರುವ ಬೋಗಿಗಳನ್ನು ಬೆಂಗಳೂರು-ಕಣ್ಣೂರು ರೈಲಿಗೆ ಜೋಡಣೆ ಮಾಡಿ ಬಿಡಲಾಗುತ್ತಿರುವುದರಿಂದ ಅಧಿಕೃತ ವೇಳಾಪಟ್ಟಿ ಇನ್ನು ಸಿದ್ಧಗೊಂಡಿಲ್ಲ.
ನಾಲ್ಕು ತಿಂಗಳ ಬಳಿಕ ಅಂದರೆ 2013ರ ಫೆ. 14ರಿಂದ ಮಂಗಡ ಟಿಕೆಟ್ ಖರೀದಿ ಪ್ರಾರಂಭವಾಗಲಿದೆ. ಅಲ್ಲಿಯ ವರೆಗೆ ಸಾಮಾನ್ಯ ಬೋಗಿಯಲ್ಲೆ ಪ್ರಯಾಣಿಸಬೇಕು. ಆದರೆ, ಮಂಗಳೂರಿನಿಂದ ಮುಂಗಡ ಟಿಕೆಟ್ ಕಾಯ್ದಿರಿಸಬಹುದಾಗಿದೆ ಎಂದು ಕೊಂಕಣ ರೈಲ್ವೆ ಅಧಿಕಾರಿಗಳು ತಿಳಿಸಿದರು.
ಸಾಮಾನ್ಯ ಬೋಗಿಯಲ್ಲಿ ಕಾರವಾರದಿಂದ ಯಶವಂತಪುರಕ್ಕೆ ರೂ. 160, ಮೈಸೂರಿಗೆ 143, ಮಂಗಳೂರಿಗೆ 84 ಟಿಕೆಟ್ ದರ ಇದೆ. ಕಾರವಾರದಿಂದ ಯಶವಂತಪುರಕ್ಕೆ ಸ್ಲೀಪರ್ಬೋಗಿಯ ಅಂದಾಜು ದರ ರೂ. 309, ಎಸಿ 3ಟೈರ್ 870, ಎಸಿ 2ಟೈರ್ 1335 ಇದೆ.
ಈಡೇರಿದ ಬೇಡಿಕೆ; ಸಂಭ್ರಮ: `ಜಿಲ್ಲಾ ಕೇಂದ್ರದಿಂದ ಬೆಂಗಳೂರಿಗೆ ರಾತ್ರಿ ರೈಲು ಸಂಪರ್ಕ ಬೇಕು ಎನ್ನುವುದು ಇಲ್ಲಿಯ ಜನರ ಬಹುದಿನಗಳ ಬೇಡಿಕೆ ಆಗಿತ್ತು. ಕೈಗಾ ಪರಮಾಣು ವಿದ್ಯುತ್ ಸ್ಥಾವರ, ಸೀಬರ್ಡ್ನ ನಂತಹ ಬೃಹತ್ ಯೋಜನೆಗಳು ಇಲ್ಲಿರುವುದರಿಂದ ರಾಜಧಾನಿಗೆ ರೈಲು ಸಂಪರ್ಕ ಅನಿವಾರ್ಯವಾಗಿತ್ತು. ಬೇಡಿಕೆ ಈಡೇರುವುದರೊಂದಿಗೆ ಈ ಭಾಗದ ಜನರ ಬಹುದಿನದ ಕನಸು ನನಸಾಗಿದೆ~ ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ರಾಮಾ ನಾಯ್ಕ ಸಂತಸ ವ್ಯಕ್ತಪಡಿಸಿದರು.
ಎನ್ಎಸ್ಯುಐನ ಜಿಲ್ಲಾ ಸಂಚಾಲಕ ಸಿದ್ದಾರ್ಥ ನಾಯಕ, ಬಾಬು ಶೇಖ್, ಗಜೇಂದ್ರ ಬಿಣಗೇಕರ್, ಓಂಕಾರ ನಾಯ್ಕ, ಚಂದನ ಥಾಮಸೆ, ಮಿಲಿಂದ ನಾಯ್ಕ, ವಿಶಾಂತ ವೆರ್ಣೆಕರ್, ಪ್ರವೀಣ ವೆರ್ಣೆಕರ್, ನಾಗರಾಜ ಕಡವಾಡ ಮೊದಲಾದವರು ಹಾಜರಿದ್ದರು.
ಕುಮಟಾ: ಬೆಂಗಳೂರು- ಕಾರವಾರ ರಾತ್ರಿ ರೈಲು ಕುಮಟಾ ರೈಲ್ವೆ ನಿಲ್ದಾಣಕ್ಕೆ ಗುರುವಾರ ಆಗಮಿಸಿದಾಗ ಸಾರ್ವಜನಿಕರು ಹರ್ಷೋದ್ಘಾರದ ಮೂಲಕ ಭವ್ಯ ಸ್ವಾಗತ ಕೋರಿದರು. ಹೊನ್ನಾವರ ಕಡೆಯಿಂದ ಬರುವಾಗಲೇ ಹೂವಿನ ಹಾರ, ಮಂಗಳೂರು- ಕಾರವಾರ ಎಕ್ಸ್ಪ್ರೆಸ್~ ಎಂದು ಬರೆದ ಬ್ಯಾನರ್ ಹೊತ್ತ ರೈಲು ಕುಮಟಾ ನಿಲ್ದಾಣದಲ್ಲಿ ನಿಲ್ಲುತ್ತಿದ್ದಂತೆಯೇ ಕುಮಟಾ ರೇಲ್ವೆ ಹೋರಾಟ ಸಮಿತಿ ಸದಸ್ಯರು ವಾದ್ಯಗೋಷ್ಠಿಯ ಮೂಲಕ ರೈಲನ್ನು ಸ್ವಾಗತಿಸಿದರು.
ಹೆಚ್ಚಿನವರು ರೈಲು ಎಂಜಿನ್ನ ಮುಂಭಾಗ ಹತ್ತಿ ಹೂವಿನ ಹಾರ ಹಾಕಿದರು. ಕುಮಟಾಕ್ಕೆ ಮಧ್ಯಾಹ್ನ 12-55ಕ್ಕೆ ಬರಬೇಕಾದ ರೈಲು ಸುಮಾರು ಅರ್ಧ ಗಂಟೆ ತಡವಾಗಿ ಆಗಮಿಸಿತು. ಈ ಸಂದರ್ಭದಲ್ಲಿ ರೇಲ್ವೆ ಹೋರಾಟ ಸಮಿತಿಯ ಸೂರಜ್ ನಾಯ್ಕ ಸೋನಿ, ಮೋಂಟಿ ಫರ್ನಾಂಡಿಸ್ ಎಸ್.ಆರ್.ಪಟೇಲ್, ಗಜು ನಾಯ್ಕ ಅಳ್ವೆಕೋಡಿ, ಹರೀಶ ನಾಯ್ಕ, ಸಂತೋಷ ನಾಯ್ಕ, ಫ್ರಾನ್ಸಿಸ್ ಫರ್ನಾಂಡಿಸ್, ವೆಂಕಟೇಶ ನಾಯ್ಕ, ಚೇತನ ಶೇಟ್. ಸಾಂಭ ಭಟ್ಟ ಮೊದಲಾದವರಿದ್ದರು.
ಅಂಕೋಲಾ ವರದಿ
ಹೊಸದಾಗಿ ಆರಂಭಗೊಂಡ ಬೆಂಗಳೂರು- ಕಾರವಾರ ರೈಲು ಗುರುವಾರ ಅಂಕೋಲಾ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ರೈಲ್ವೆ ಹೋರಾಟ ಕ್ರಿಯಾ ಸಮಿತಿ ಹಾಗೂ ಸಾರ್ವಜನಿಕರು ಹೂವಿನ ಹಾರ ಹಾಕಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷ ರಮಾನಂದ ನಾಯಕ, ಪ್ರಮುಖರಾದ ವಿಠ್ಠಲದಾಸ ಕಾಮತ, ಆರ್.ಎನ್. ನಾಯಕ, ಭಾಸ್ಕರ ನಾರ್ವೇಕರ, ಉಮೇಶ ನಾಯ್ಕ, ಉದಯ ನಾಯ್ಕ, ವಿನೋದ ನಾಯಕ, ರಾಜೇಂದ್ರ ನಾಯ್ಕ, ಪಾಂಡುರಂಗ ಗೌಡ, ಮಾದೇವ ಗೌಡ, ಚಂದ್ರಕಾಂತ ಬಲೆಗಾರ, ಗೋಪು ಅಡ್ಲೂರ, ರಾಮಚಂದ್ರ ನಾಯ್ಕ, ವಿಲಾಸ ನಾಯಕ, ಕಾರ್ತಿಕ ನಾಯ್ಕ, ಪುರುಷೋತ್ತಮ ನಾಯ್ಕ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.