ಸಕಲೇಶಪುರ: ಭಾರಿ ಮಳೆಯಿಂದಾಗಿ ಹಾಸನ- ಸಕಲೇಶಪುರ ರೈಲು ಮಾರ್ಗದ ಕೆಂದನಮನೆ ಕಿ.ಮೀ. 32ರ ಸೇತುವೆ ಬಳಿ ಭೂ ಕುಸಿತದಿಂದ ಗುರುವಾರ ಸ್ಥಗಿತಗೊಂಡಿದ್ದ ರೈಲು ಸಂಚಾರ ಪುನಃ ಆರಂಭಗೊಂಡಿದೆ.
ಇಲಾಖೆ ಎಂಜಿನಿಯರ್ಗಳು ಹಾಗೂ ಸಿಬ್ಬಂದಿ ತುರ್ತು ಕಾಮಗಾರಿ ಕೈಗೊಂಡು ಗುರುವಾರ ರಾತ್ರಿ 7.30ರ ಸುಮಾರಿಗೆ ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸಂಜೆ 4.15ರಿಂದ ಇಲ್ಲಿಯ ನಿಲ್ದಾಣದಲ್ಲಿಯೇ ನಿಂತಿದ್ದ ಕಾರವಾರ-ಯಶವಂತಪುರ ರೈಲು ರಾತ್ರಿ 8ಕ್ಕೆ ಹೊರಟಿತು.
ಭೂ ಕುಸಿತದಿಂದ ಸದ್ಯಕ್ಕೆ ದುರಸ್ತಿ ಕಾಮಗಾರಿ ಸಾಧ್ಯವಿಲ್ಲ ಎಂದು ಇಲಾಖೆಯ ಅಧಿಕಾರಿಗಳು ಸುಮಾರು 300 ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಮಾಡಿದ್ದರು. ಹೀಗಾಗಿ, ರೈಲು ಪ್ರಯಾಣಿಕರಿಲ್ಲದೆ ಖಾಲಿಯಾಗಿ ಬೆಂಗಳೂರಿನತ್ತ ತೆರಳಿತು.ಕಣ್ಣೂರು, ಕಾರವಾರದಿಂದ ಯಶವಂತಪುರ ಹಾಗೂ ಯಶವಂತಪುರದಿಂದ ಕಾರವಾರ-ಕಣ್ಣೂರಿಗೆ ಗುರುವಾರ ರಾತ್ರಿ ಪ್ರಯಾಣಿಕರ ರೈಲುಗಳು ಸಂಚರಿಸಿದ್ದು, ಈ ಮಾರ್ಗದಲ್ಲಿ ಪುನಃ ಯಾವುದೇ ಅಡಚಣೆ ಉಂಟಾಗಿಲ್ಲ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.