ಶಿವಮೊಗ್ಗ: ಶಿವಮೊಗ್ಗ- ತಾಳಗುಪ್ಪ ಮಾರ್ಗದಲ್ಲಿ ರೈಲು ಹಳಿ ವಿಸ್ತರಣೆ ಮತ್ತು ರೈಲು ನಿಲ್ದಾಣದ ನವೀಕರಣಕ್ಕೆ ಸಂಬಂಧಿಸಿದಂತೆ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಡಿ.ಇ. ವರ್ಮ ನೇತೃತ್ವದ ತಂಡ ಬುಧವಾರ ಸ್ಥಳ ಪರಿಶೀಲನೆ ನಡೆಸಿತು.
ರೈಲು ಸೌಲಭ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿಲ್ದಾಣವನ್ನು ಮೂರು ಹಳಿಗಳಿಂದ 5ಕ್ಕೆ ಏರಿಸಲು ಉದ್ದೇಶಿಸಲಾಗಿದೆ. ಜತೆಗೆ ನಿಲ್ದಾಣವನ್ನು ನವೀಕರಿಸಲು ಯೋಜನೆ ರೂಪಿಸಲಾಗಿದೆ. ಈ ಸಂಬಂಧ ರೈಲ್ವೆ ಮಂಡಳಿಯಿಂದ ಅನುಮೋದನೆಯೂ ದೊರಕಿದೆ. ಆದರೆ ಇದಕ್ಕಾಗಿ ಜಾಗದ ಕೊರತೆಯಿದ್ದು, ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಸ್ಥಳೀಯ ರೈಲ್ವೆ ಅಧಿಕಾರಿಗಳು ವರ್ಮ ಅವರ ಗಮನಕ್ಕೆ ತಂದರು.
ಈ ಸಂಬಂಧ ಸ್ಥಳದ ಪರಿಶೀಲನೆ ನಡೆಸುತ್ತಿರುವಾಗ ಜಮಾವಣೆಗೊಂಡ ಸಮೀಪದ ಅಮೀರ್ ಅಹಮದ್ ಕಾಲೊನಿ ನಿವಾಸಿಗಳು, ಅಧಿಕಾರಿಗಳ ಜತೆ ಮಾತಿನ ಚಕಮಕಿ ನಡೆಸಿದರು.
ಏಕಾಏಕಿ ತೆರವುಗೊಳಿಸುವುದಾಗಲಿ, ಭೂಸ್ವಾಧೀನಪಡಿಸಿಕೊಳ್ಳುವುದಾಗಲಿ ಸರಿ ಅಲ್ಲ. ಯಾವುದೇ ಕ್ರಮಕ್ಕೂ ಇಲಾಖೆ ಮುಂದಾಗಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ಅಧಿಕಾರಿಗಳು, ಇಲ್ಲಿ ರೈಲ್ವೆ ಇಲಾಖೆಗೆ ಸಂಬಂಧಿಸಿದ ಹಾಗೂ ಖಾಸಗಿ ಜಾಗವೂ ಇದೆ. ಜಿಲ್ಲಾಡಳಿತ ಇದರ ಸ್ಪಷ್ಟ ಚಿತ್ರಣ ನೀಡಲಿದ್ದು, ನಂತರ ಮುಂದುವರಿಯಲಾಗುವುದು ಎಂದು ಸ್ಪಷ್ಟಪಡಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀರಂಗಯ್ಯ, ಉಪ ವಿಭಾಗಾಧಿಕಾರಿ ಎಂ.ಎಲ್. ವೈಶಾಲಿ, ತಹಶೀಲ್ದಾರ್ ಬಾಲಸುಬ್ರಹ್ಮಣ್ಯಂ, ಭೂದಾಖಲೆಗಳ ಇಲಾಖೆ ಉಪ ನಿರ್ದೇಶಕ ಗಡದವರ ಮತ್ತಿತರರು ಉಪಸ್ಥಿತರಿದ್ದರು.