ಚಿಕ್ಕಮಗಳೂರು: ರೈಲ್ವೆ ಯೋಜನೆಯ ಕಾಮಗಾರಿಗಳ ವೇಗ ತ್ವರಿತಗೊಳಿಸಿ, ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ರೈಲ್ವೆ ಅಧಿಕಾರಿಗಳಿಗೆ ಶಾಸಕ ಸಿ.ಟಿ.ರವಿ ಸೂಚನೆ ನೀಡಿದರು.
ಚಿಕ್ಕಮಗಳೂರು ರೈಲ್ವೆ ನಿಲ್ದಾಣದ ಹಾಗೂ ರೈಲ್ವೆ ಹಳಿಗಳ ಕಾಮಗಾರಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದಿಂದ ಒಟ್ಟು 250 ಕೋಟಿ ರೂಪಾಯಿ ಮಂಜೂರಾಗಿದೆ. ರೈಲ್ವೆ ಕಾಮಗಾರಿಗಳ ಕೆಲಸಕ್ಕೆ ಸಾಕಷ್ಟು ಅನುದಾನವಿದೆ. ಕಾಮಗಾರಿ ತ್ವರಿತಗೊಳಿಸ ಬೇಕೆಂದು ರೈಲ್ವೆ ಅಧಿಕಾರಿಗಳಿಗೆ ತಿಳಿಸಿದರು.
ಕಡೂರು ಮತ್ತು ಚಿಕ್ಕಮಗಳೂರು ಮಧ್ಯೆ ಬಿಸಲೇಹಳ್ಳಿ, ಸಖರಾಯಪಟ್ಟಣ, ಚಿಕ್ಕಮಗಳೂರು ರೈಲ್ವೆ ನಿಲ್ದಾಣಗಳು ಆಗಲಿವೆ. ಹೊಸಕೋಟೆ ಬಳಿಯೂ ಸ್ಟೇಷನ್ ನಿರ್ಮಾಣದ ಬಗ್ಗೆ ಚಿಂತನೆ ಇದೆ ಎಂದರು. ಜಿಲ್ಲಾಧಿಕಾರಿ ಡಿ.ಕೆ. ರಂಗಸ್ವಾಮಿ, 2012 ಮಾರ್ಚ್ ಅಂತ್ಯದೊಳಗೆ ಎಲ್ಲ ಕಾಮಗಾರಿಗಳು ಪೂರ್ಣಗೊಳಿಸಿ, ರೈಲು ಎಂಜಿನ್ ಓಡಾಟಕ್ಕೆ ಕಮಿಷನರ್ ಆಫ್ ರೈಲ್ವೆ ಸೇಫ್ಟಿಗೆ 2012ರ ಮೇ ಅಂತ್ಯ ದೊಳಗೆ ಹಸ್ತಾಂತರಿಸಬೇಕೆಂದು ರೈಲ್ವೆ ಅಧಿಕಾರಿಗಳಿಗೆ ತಿಳಿಸಿದರು.
ನಗರಸಭಾ ಅಧ್ಯಕ್ಷ ಪ್ರೇಮ್ ಕುಮಾರ್, ಉಪವಿ ಭಾಗೀಯ ಅಧಿಕಾರಿ ಡಾ.ಪ್ರಶಾಂತ್, ನಗರಸಭೆ ಮಾಜಿ ಅಧ್ಯಕ್ಷ ತಮ್ಮಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕನಕರಾಜ್ ಅರಸ್, ರೈಲ್ವೆ ಅಧಿಕಾರಿಗಳಾದ ಎ.ಎನ್.ಬ್ಯಾನರ್ಜಿ, ನಾಣಪ್ಪ ನಾಯ್ಕ ಇನ್ನಿತರರು ಇದ್ದರು.