ನೆಲಮಂಗಲ ಸಮೀಪದ ಬೈರಶೆಟ್ಟಿಹಳ್ಳಿ ವ್ಯಾಪ್ತಿಯ ರೈಲ್ವೇ ಗೊಲ್ಲಹಳ್ಳಿಯ ಉದ್ಭವ ಶ್ರೀ ಬೈಲಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ರಥೋತ್ಸವ ನಡೆಯಲಿದೆ.
ಪ್ರತಿ ವರ್ಷವು ಶ್ರೀ ರಾಮನವಮಿಯ ಮಾರನೇ ದಿನ ಇಲ್ಲಿ ಬ್ರಹ್ಮರಥೋತ್ಸವ ನಡೆಯುತ್ತದೆ. ಅದರಂತೆ ಶನಿವಾರ ಮಧ್ಯಾಹ್ನ 1 ಗಂಟೆಗೆ ರಥೋತ್ಸವ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.
ದೇವಸ್ಥಾನದ ಹಿಂದೆಯೇ ರೈಲ್ವೇ ಹಳಿ ಹಾದು ಹೋಗಿತ್ತು. ಮೊದಲ ಬಾರಿಗೆ ರೈಲು ಸಂಚಾರ ಪ್ರಾರಂಭವಾದಾಗ ರೈಲು ಗೊಲ್ಲಹಳ್ಳಿ ಹತ್ತಿರ ಬರುತ್ತಿದ್ದಂತೆಯೆ ನಿಂತುಬಿಟ್ಟಿತು, ರೈಲ್ವೆ ಇಲಾಖೆಯವರು ಪರೀಕ್ಷಿಸಿದಾಗ ಯಾವುದೇ ತಾಂತ್ರಿಕ ತೊಂದರೆ ಕಂಡು ಬರಲಿಲ್ಲ, ಇದು ಆಂಜನೇಯನ ಪ್ರಭಾವವೇ ಎಂದು ತಿಳಿದು ರೈಲ್ವೆ ಹಳಿಯನ್ನು ಸ್ವಲ್ಪ ದೂರಕ್ಕೆ ಸ್ಥಳಾಂತರಿಸಲಾಯಿತು.
ಗೊಲ್ಲಹಳ್ಳಿಯಲ್ಲಿ ರೈಲು ನಿಲುಗಡೆ ಕೊಡಲಾಯಿತು. ಗೊಲ್ಲಹಳ್ಳಿ ಎಂದು ಕರೆಯುತ್ತಿದ್ದ ಹಳ್ಳಿಯನ್ನು ಈಗ ರೈಲ್ವೇ ಗೊಲ್ಲಹಳ್ಳಿ ಎಂದು ಕರೆಯಲಾಗುತ್ತಿದೆ.