ಚೆನ್ನೈ (ಪಿಟಿಐ): ಹತ್ತು ಜನರ ಸಾವಿಗೆ ಕಾರಣವಾದ ಅರಕ್ಕೋಣಂ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಇಲಾಖಾ ತನಿಖೆ ಶುಕ್ರವಾರ ಆರಂಭವಾಯಿತು. ಚೆನ್ನೈ ಬೀಚ್-ವೆಲ್ಲೂರು ನಡುವಿನ ವಿದ್ಯುತ್ ಚಾಲಿತ ರೈಲಿನ ಚಾಲಕ ರಾಜ್ಕುಮಾರ್ ಸೇರಿದಂತೆ ಇತರರ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಲಾಯಿತು.
ಪ್ರಾಥಮಿಕ ತನಿಖೆಯಿಂದ ರೈಲಿನ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿತ್ತು. ಆಸ್ಪತ್ರೆಯಲ್ಲಿ ರಾಜ್ಕುಮಾರ್ ಚಿಕಿತ್ಸೆ ಪಡೆಯುತ್ತಿದ್ದು, ಆತ ಕ್ಷೀಣಧ್ವನಿಯಲ್ಲಿ ಮಾತನಾಡುತ್ತಿದ್ದಾನೆ. ಅಲ್ಲಿಯೇ ಆತನ ಹೇಳಿಕೆ ಪಡೆಯಲಾಯಿತು ಎಂದು ರೈಲ್ವೆ ಸುರಕ್ಷಾ ಆಯುಕ್ತ ಎಸ್.ಕೆ.ಮಿಟ್ಟಲ್ ತಿಳಿಸಿದರು.
ಎಲ್ಲಾ ಸಾಕ್ಷ್ಯಗಳನ್ನೂ ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ವರದಿ ನೀಡುವುದಾಗಿ ಅವರು ಹೇಳಿದರು.