ಯಲಹಂಕ: ಬಿಬಿಎಂಪಿ ಮತ್ತು ರೈಲ್ವೆ ಇಲಾಖೆ ಜಂಟಿಯಾಗಿ ರೂ 30 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಅಲ್ಲಾಳಸಂದ್ರ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಎಸ್.ಆರ್.ವಿಶ್ವನಾಥ್ ಗುದ್ದಲಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಅಲ್ಲಾಳಸಂದ್ರ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಬಿಬಿಎಂಪಿಯಿಂದ ರೂ 18 ಕೋಟಿ ಹಾಗೂ ರೈಲ್ವೆ ಇಲಾಖೆಯಿಂದ ರೂ 12 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು, ಒಂದು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಈ ರಸ್ತೆಯು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಗೆ ಸಂಪರ್ಕ ಕಲ್ಪಿಸುತ್ತಿದ್ದು, ಇಲ್ಲಿ ರೈಲು ಓಡಾಟ ಹೆಚ್ಚಿರುವ ಕಾರಣ ರೈಲ್ವೆಗೇಟ್ ಹಾಕಿದಾಗ ವಾಹನ ಸವಾರರು ಸರಿಯಾದ ಸಮಯಕ್ಕೆ ತಮ್ಮ ಪ್ರದೇಶಗಳಿಗೆ ತಲುಪಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಮೇಲ್ಸೇತುವೆ ನಿರ್ಮಿಸುವುದರಿಂದ ದೊಡ್ಡಬಳ್ಳಾಪುರ ಹಾಗೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ವಾಹನ ಸವಾರರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.
ಬಿಬಿಎಂಪಿ ಸದಸ್ಯ ಮುನಿರಾಜು, ನೈರುತ್ಯರೈಲ್ವೆ ವಲಯದ ಉಪ ಮುಖ್ಯ ಎಂಜಿನಿಯರ್ ವಿ.ಹರಿಬಾಬು, ಕಾರ್ಯಪಾಲಕ ಎಂಜಿನಿಯರ್ ಸೆಲ್ವಂ, ಬಿಜೆಪಿ ಮುಖಂಡರಾದ ರಮೇಶ್, ಸತೀಶ್, ಸೋಮಶೇಖರ್ ಮೊದಲಾದವರು ಹಾಜರಿದ್ದರು.