ಮಹದೇವಪುರ: ಇಲ್ಲಿನ ದೊಡ್ಡಕನ್ನಳ್ಳಿ ಹಾಗೂ ಕೊಡತಿ ಗ್ರಾಮಗಳ ನಡುವೆ ಇರುವ ರೈಲ್ವೆ ಗೇಟ್ ಬಳಿಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ಅವರು ಮಂಗಳವಾರ ಚಾಲನೆ ನೀಡಿದರು.
ಗುದ್ದಲಿ ಪೂಜೆಯನ್ನು ನೆರವೇರಿಸಿದ ಬಳಿಕ ಮಾತನಾಡಿದ ಸಚಿವರು, `ಸರ್ಜಾಪುರ-ಬೆಂಗಳೂರು ರಸ್ತೆಯಲ್ಲಿ ದಿನದಿಂದ ದಿನಕ್ಕೆ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ. ಅದರಲ್ಲೂ ಈ ರಸ್ತೆಯ ಮಧ್ಯಭಾಗದಲ್ಲಿರುವ ರೈಲ್ವೆ ಗೇಟ್ ಪ್ರದೇಶದಲ್ಲಿ ವಾಹನಗ ಓಡಾಟಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಸ್ಥಳದಲ್ಲಿ ಅಗತ್ಯವಾದ ಮೇಲ್ಸೇತುವೆಯನ್ನು ನಿರ್ಮಾಣ ಮಾಡಲಾಗುತ್ತಿದೆ' ಎಂದರು.
ಆದಷ್ಟು ಬೇಗನೆ ಕಾಮಗಾರಿ ಆರಂಭಗೊಳ್ಳಲಿದ್ದು, ಮುಂದಿನ ವರ್ಷದಲ್ಲಿ ಜನತೆಯ ಸುಗಮ ಸಂಚಾರಕ್ಕೆ ಸಿದ್ದಗೊಳ್ಳಲಿದೆ ಎಂದು ಭರವಸೆ ನೀಡಿದ ಅವರು `ಮೇಲ್ಸೇತುವೆಗಾಗಿ 1500 ಚದರ ಮೀಟರ್ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಅದಕ್ಕೆ ಬದಲಿಯಾಗಿ ಟಿಡಿಆರ್ ಪತ್ರಗಳನ್ನು ನೀಡಲಾಗಿದೆ' ಎಂದರು. `ಹೂಡಿ ಬಳಿ ನಿರ್ಮಾಣ ಹಂತದಲ್ಲಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯು ಮೂರ್ನಾಲ್ಕು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಅದಾದ ಬಳಿಕ ಸಾರ್ವಜನಿಕರ ಸಂಚಾರಕ್ಕೆ ಮೇಲ್ಸೇತುವೆಯನ್ನು ಮುಕ್ತಗೊಳಿಸಲಾಗುವುದು' ಎಂದು ಅವರು ತಿಳಿಸಿದರು.
`ಕ್ಷೇತ್ರ ವ್ಯಾಪ್ತಿಯಲ್ಲಿ ಸುಗಮ ಸಂಚಾರಕ್ಕೆ ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ. ಸಿಗ್ನಲ್ ಮುಕ್ತ ವೃತ್ತಗಳು ಮತ್ತು ರೈಲ್ವೆ ಮೇಲ್ಸೇತುವೆಗಳ ಮೂಲಕ ನಾಗರಿಕರು ಮತ್ತು ವಾಹನ ಸವಾರರ ನಿತ್ಯ ಬವಣೆಗೆ ಪರಿಹಾರವನ್ನು ಕಂಡುಕೊಳ್ಳಲಾಗುತ್ತಿದೆ' ಎಂದು ಸಚಿವ ಲಿಂಬಾವಳಿ ಅವರು ನುಡಿದರು.