ಹುಬ್ಬಳ್ಳಿ: ನೈರುತ್ಯ ರೈಲ್ವೆ ಹಾಗೂ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಘಟಕ ಬುಧವಾರ ಹಮ್ಮಿಕೊಂಡಿದ್ದ ನೇತ್ರ ತಪಾಸಣಾ ಶಿಬಿರದಲ್ಲಿ 170 ಮಂದಿ ರೈಲ್ವೆ ನೌಕರರ ಕಣ್ಣಿನ ತಪಾಸಣೆ ನಡೆಸಲಾಯಿತು.
ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿಯಲ್ಲಿ ನಡೆದ ಶಿಬಿರದಲ್ಲಿ ತಪಾಸಣೆಗೊಳಗಾದವರ ಪೈಕಿ ಐವರಿಗೆ ತೀವ್ರ ತೊಂದರೆ ಇರುವುದು ಪತ್ತೆಯಾಗಿದ್ದು ಅವರಿಗೆ ಶೀಘ್ರವಾಗಿ ಪರಿಣಾಮಕಾರಿ ಚಿಕಿತ್ಸೆ ಪಡೆಯಲು ಸೂಚಿಸಲಾಯಿತು.
ಡಾ. ಸಚಿನ್ ಮುರ್ಗುಡೆ ಕಣ್ಣಿನ ರೋಗಗಳ ಬಗ್ಗೆ ಹಾಗೂ ಪರಿಣಾಮಕಾರಿ ಚಿಕಿತ್ಸೆಯ ಕುರಿತು ಮಾಹಿತಿ ನೀಡಿದರು. ನೇತ್ರದಾನದ ಬಗ್ಗೆ ಮಾಹಿತಿ ನೀಡಿ ಅರಿವು ಮೂಡಿಸ ಲಾಯಿತು. 25 ಮಂದಿ ಸ್ಕೌಟ್ಸ್, ಗೈಡ್ಸ್, ರೋವರ್ಸ್ ಹಾಗೂ ರೇಂಜರ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಹಾಗೂ ಸ್ಕೌಟ್ಸ್-ಗೈಡ್ಸ್ನ ಜಿಲ್ಲಾ ಅಧ್ಯಕ್ಷ ಪ್ರವೀಣ ಮಿಶ್ರ, ಕೇಂದ್ರ ರೈಲ್ವೆ ಆಸ್ಪತ್ರೆಯ ನಿರ್ದೇಶಕ ಡಾ. ಜಯಕುಮಾರ, ಸ್ಕೌಟ್ಸ್-ಗೈಡ್ಸ್ನ ಜಿಲ್ಲಾ ಮುಖ್ಯ ಕಮಾಂಡರ್ ಪಿ.ಆರ್.ಎಸ್. ರಾಮನ್ ಉಪಸ್ಥಿತರಿದ್ದರು.
ಡಾ. ಶ್ವೇತಾ ಮುರ್ಗುಡೆ, ಡಾ. ಉಪ್ಪಳ ಗಾಂಧಿ, ಡಾ. ಕುಲಕರ್ಣಿ ಹಾಗೂ ಮಲ್ಲೇಶ ಡೋಂಗ್ರೆ ತಪಾಸಣೆ ನಡೆಸಿದರು.