ಮಂಗಳೂರು: ನಗರದ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಹಾಡುಹಗಲೇ ಬಾಲಕಿಯೊಬ್ಬಳ ಮೇಲೆ ರೈಲ್ವೆ ಬೋಗಿಯಲ್ಲಿ ನಡೆದಿದ್ನದ ಅತ್ಯಾಚಾರ ಪ್ರಕರಣದಲ್ಲಿ ಇಲ್ಲಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಅಪರಾಧಿಗಳಿಬ್ಬರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 25 ಸಾವಿರ ರೂಪಾಯಿ ದಂಡ ವಿಧಿಸಿ ಶನಿವಾರ ತೀರ್ಪು ನೀಡಿದೆ. ಜೊತೆಗೆ ದಂಡ ಪಾವತಿಸಲು ತಪ್ಪಿದಲ್ಲಿ ಎರಡು ವರ್ಷಗಳ ಸಾದಾ ಸಜೆ ಅನುಭವಿಸಬೇಕೆಂದೂ ನ್ಯಾಯಾಲಯ ಹೇಳಿದೆ.
ಅಶೋಕ್ ಮತ್ತು ನಿಶೀತ್ ಶಿಕ್ಷೆಗೆ ಒಳಗಾದವರು. ನಿಶೀತ್ ರೈಲ್ವೆ ಇಲಾಖೆ ನೌಕರನಾಗಿದ್ದರೇ, ಅಶೋಕ್ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ.
ಇನ್ನು, ಪ್ರಕರಣದ ಮತ್ತೊಬ್ಬ ಆರೋಪಿ ಅಬ್ದುಲ್ ಸತ್ತಾರ್ (ಉಳ್ಳಾಲ) ವಿರುದ್ಧ ಸೂಕ್ತ ಪುರಾವೆಗಳಿಲ್ಲ ಎಂದು ಅಭಿಪ್ರಾಯ ಪಟ್ಟ ನ್ಯಾಯಾಧೀಶ ಬಿ.ಕೆ. ನಾಯಿಕ್, ಅವರನ್ನು ದೋಷಮುಕ್ತಗೊಳಿಸಿದ್ದಾರೆ.
ಅಲ್ಲದೇ, ಪ್ರಕರಣದಲ್ಲಿ ರೈಲ್ವೆ ಅಧಿಕಾರಿಗಳು ಹಾಗೂ ರೈಲ್ವೆ ಪೊಲೀಸರ ಲೋಪವಿದೆ ಎಂದು ಪರಿಗಣಿಸಿದ ನ್ಯಾಯಾಲಯ, ಸಂತ್ರಸ್ತ ಬಾಲಕಿಗೆ ರೈಲ್ವೆ ಮಂಡಳಿ ಸೂಕ್ತ ಪರಿಹಾರ ನೀಡಬೇಕೆಂದು ಹೇಳಿದೆ.