ಚಿಕ್ಕಬಳ್ಳಾಪುರ: ಉತ್ತಮ ಚಿಕಿತ್ಸೆಯ ನಿರೀಕ್ಷೆಯಲ್ಲಿ ಬರುವ ರೋಗಿಗಳಿಗೆ ಆಸ್ಪತ್ರೆಯ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಆತ್ಮೀಯತೆಯಿಂದ ಕಾಣಬೇಕು. ಎಷ್ಟೇ ದುಬಾರಿ ಔಷಧಿ ನೀಡಿದರೂ ಪರಿಹಾರ ಕಾಣದ ಕೆಲ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಪ್ರೀತಿ ಮತ್ತು ವಿಶ್ವಾಸದಿಂದ ನಿವಾರಣೆಗೊಳ್ಳುತ್ತವೆ. ಇದನ್ನರಿತು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದರು.
ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಗುರುವಾರ ರೋಗಿಗಳನ್ನು ಮತ್ತು ಸಂಬಂಧಿಕರನ್ನು ಭೇಟಿಯಾದ ಬಳಿಕ ಆಸ್ಪತ್ರೆಯ ಸರ್ಜನ್, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದ ಅವರು, ರೋಗಿಗಳಿಗೆ ಔಷಧಿಯ ಜೊತೆ ಪ್ರೀತಿ, ವಿಶ್ವಾಸವೂ ತುಂಬಾ ಮುಖ್ಯ. ಹಲವಾರು ಜಂಜಾಟಗಳಿಗೆ ತುತ್ತಾಗಿ ಅನಾರೋಗ್ಯಗೊಂಡು ಆಸ್ಪತ್ರೆಗೆ ಬರುವ ಅವರಲ್ಲಿ ನೆಮ್ಮದಿ ಭಾವ ಮೂಡಿಸಬೇಕು. ಸಮಸ್ಯೆಗಳು ಕೊನೆಯಾಗುತ್ತವೆ ಎಂಬ ವಿಶ್ವಾಸ ಅವರಲ್ಲಿ ಬರಬೇಕು’ ಎಂದರು.
ಆಸ್ಪತ್ರೆಯಲ್ಲಿ ಸ್ವಚ್ಛತೆ, ಬದ್ಧತೆ ಮತ್ತು ಔಷಧಿ ತುಂಬಾ ಮುಖ್ಯವಾಗಿದ್ದು, ಇವು ಮೂರನ್ನು ಸದಾ ಕಾಯ್ದುಕೊಳ್ಳಬೇಕು. ಇವು ಮೂರು ವಿಭಾಗಗಳಲ್ಲಿ ಯಾವುದಾದರೂ ಒಂದು ಕೊರತೆಯಾದಲ್ಲಿ, ರೋಗಿಗಳಿಗೆ ಆರೈಕೆ ಮಾಡಲಾಗುವುದಿಲ್ಲ. ಮಲಿನ ವಾತಾವರಣದಿಂದಾಗಿ ರೋಗಿಗಳು ಇನ್ನಷ್ಟು ಅನಾರೋಗ್ಯಕ್ಕೀಡಾದರೆ, ಬದ್ಧತೆಯ ಕೊರತೆಯಿಂದಾಗಿ ಉತ್ತಮ ಚಿಕಿತ್ಸೆ ಸಿಗುವುದಿಲ್ಲ. ಔಷಧಿಯಿಲ್ಲವೆಂದರೆ ರೋಗಿಗಳು ಸಹ ಆಸ್ಪತ್ರೆಯತ್ತ ಬರಲು ಇಚ್ಛಿಸುವುದಿಲ್ಲ ಎಂದು ಅವರು ತಿಳಿಸಿದರು.
ಬಳಿಕ ಆಸ್ಪತ್ರೆಯಲ್ಲಿನ ಸೌಕರ್ಯಗಳ ಕೊರತೆ ಮತ್ತು ಅವ್ಯವಸ್ಥೆಗೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತಪಡಿಸಿದ ಅವರು, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳಲ್ಲಿ ಸೇವಾ ಬದ್ಧತೆ ಮತ್ತು ಚಾಕಚಕ್ಯತೆಯಿರದ ಕಾರಣದಿಂದಲೇ ಆಸ್ಪತ್ರೆಗೆ ಇಂತಹ ದುಸ್ಥಿತಿ ಬಂದೊದಗಿದೆ. ಆಸ್ಪತ್ರೆಯಲ್ಲಿ ಎಲ್ಲಿಯೂ ಸ್ವಚ್ಛತೆ ಕಾಪಾಡಲಾಗಿಲ್ಲ. ಎಲ್ಲಿ ಬೇಕೆಂದಲ್ಲಿ, ಎಲೆ ಅಡಿಕೆ ಉಗುಳಿದ್ದರಿಂದ ಆಸ್ಪತ್ರೆಯ ಗೋಡೆಗಳು ಗಲೀಜಾದಂತೆ ಕಂಡು ಬರುತ್ತವೆ. ಸ್ವಚ್ಛತಾ ನಿರ್ವಹಣಾ ಕಾರ್ಯವನ್ನು ಯಾರೂ ಸಮರ್ಪಕವಾಗಿ ನಿರ್ವಹಿಸುವುದಿಲ್ಲವೊ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸೌಕರ್ಯಗಳ ಕೊರತೆಯಿದೆ ಎಂದು ದಿನಗಳನ್ನು ದೂಡುವುದರ ಬದಲು ಆಸ್ಪತ್ರೆಯ ಮುಖ್ಯಸ್ಥರು ಮತ್ತು ಸಿಬ್ಬಂದಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕೇಂದ್ರ ಕಚೇರಿಗೆ ಮಾಹಿತಿ ನೀಡಬೇಕು. ಆಸ್ಪತ್ರೆಗೆ ಯಾವ್ಯಾವ ಸೌಲಭ್ಯಗಳ ಅಗತ್ಯತೆಯಿದೆಯೋ, ಅವುಗಳಿಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸಬೇಕು. ಅದ್ಯಾವುದನ್ನೂ ಮಾಡದೇ ಯಥಾಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುವುದು ಮುಂದುವರೆಸಿದ್ದಲ್ಲಿ, ಸಮಸ್ಯೆ ಹೇಗೆ ತಾನೇ ಪರಿಹಾರಗೊಳ್ಳುತ್ತದೆ ಎಂದು ಅವರು ಪ್ರಶ್ನಿಸಿದರು.
ಜನರ ಆರೋಗ್ಯ ರಕ್ಷಣೆಗಾಗಿ ಮತ್ತು ಆಸ್ಪತ್ರೆಯ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಎಷ್ಟೆಲ್ಲ ಯೋಜನೆಗಳನ್ನು ರೂಪಿಸುವುದರ ಜೊತೆಗೆ ಅನುದಾನವನ್ನು ಬಿಡುಗಡೆ ಮಾಡುತ್ತಿದೆ. ಲಭ್ಯವಿರುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡಲ್ಲಿ, ಆಸ್ಪತ್ರೆಯಲ್ಲಿನ ಬಹುತೇಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಆಸ್ಪತ್ರೆಗೆ ಸಂಬಂಧಿಸಿದಂತೆ ಪದೇ ಪದೇ ಅಹವಾಲುಗಳನ್ನು ಸಲ್ಲಿಸುವಂತಹ ಪರಿಸ್ಥಿತಿ ಇರುವುದಿಲ್ಲ ಎಂದು ಅವರು ತಿಳಿಸಿದರು. ಜಿಲ್ಲಾ ಸರ್ಜನ್ ಡಾ. ಮಂಜುಳಾ, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.