ರೋಣ: ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ನಿರ್ವಹಿಸುವಲ್ಲಿ ವಿಫಲರಾದ ಹೆಸ್ಕಾಂ ಎಂಜಿನಿಯರ ಹಾಗೂ ಪಡಿತರ ವಿತರಣೆಯಲ್ಲಿ ಅಸಮರ್ಪಕ ನೀತಿ ಅನುಸರಿಸುತ್ತಿರುವ ಆಹಾರ ವಿಭಾಗದ ಅಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಅವರನ್ನು ಶಾಸಕ ಕಳಕಪ್ಪ ಬಂಡಿ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಸೋಮವಾರ ತಾ.ಪಂ. ಸಭಾಭವನದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನ ಮುಶಿಗೇರಿ ತಾ.ಪಂ. ವ್ಯಾಪ್ತಿಯಲ್ಲಿ ವಿದ್ಯುತ್ ಕಂಬ ಉರುಳಿ ಬಿದ್ದು ಸಂಪರ್ಕ ಕಡಿತಗೊಂಡು ಹದಿನೈದು ದಿನಗಳಾದರು ದುರಸ್ಥಿ ಕೈಕೊಳ್ಳದೆ ಇರುವುದರಿಂದ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿದೆ ಎಂದು ದೂರಿದಾಗ ಶಾಸಕರು ಸಭೆಯಲ್ಲಿದ್ದ ಹೆಸ್ಕಾಂ ಎಂಜಿನಿಯರ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ಅಧಿಕಾರಿಗಳು ಕಚೇರಿಯಿಂದ ಹೂರಹೋಗುವ ಸಂದರ್ಭಗಳಲ್ಲಿ ಮೂವಮೆಂಟ್ ರಜಿಸ್ಟಾರನಲ್ಲಿ ದಾಖಲಿಸಬೇಕು ದೂರವಾಣಿ ಸಂಪರ್ಕಗಳನ್ನು ನಿರಂತರವಾಗಿ ಸಿದ್ದತೆಯಲ್ಲಿ ಇಟ್ಟುಕೊಂಡಿರಬೇಕು ಎಂದು ತಾಕೀತು ಮಾಡಿದರು.
ತಾಲೂಕಿನಲ್ಲಿ ಪಡಿತರ ವಿತರಣೆಯಲ್ಲಿ ಕಂಡು ಬಂದಿರುವ ಅವ್ಯವಸ್ಥೆ ಕುರಿತು ಕಿಡಿ ಕಾರಿದ ಶಾಸಕರು ಆಹಾರ ವಿಭಾಗದ ಶಿರಸ್ತೆದಾರ ಬೆಣ್ಣೆಶಟ್ರ ಅವರಿಗೆ ಶೀಘ್ರ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ತಾಲ್ಲೂಕಿನ ಪ್ರತಿಯೊಂದು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶೇ 50ರಷ್ಟು ಪ್ರವೇಶಗಳನ್ನು ಹೊಂದಬೇಕು ಎಂದು ಸಭೆಯಲ್ಲಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗೆ ಆದೇಶಿ ನೀಡಿ ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ರೋಣದಲ್ಲಿ ಬಣ್ಣದ ಉಸುಕು ಮಿಶ್ರಿತ ಗೊಬ್ಬರಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ರೈತರಿಂದ ಕೇಳಿ ಬಂದಿವೆ ಇದನ್ನು ತಡೆಗಟ್ಟಲು ಸಹಾಯಕ ಕೃಷಿ ನಿರ್ದೇಶಕರು ತಾಲ್ಲೂಕಿನ ಪ್ರತಿಯೊಂದು ಗೊಬ್ಬರ ಬೀಜ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಸರ್ಕಾರ ನಿಗದಿ ಪಡಿಸಿದ ದರಗಳಿಗೆ ಅನುಗುಣವಾಗಿ ಗೊಬ್ಬರವನ್ನು ಮಾರಾಟ ಮಾಡುವಂತೆ ಕಟ್ಟುನಿಟ್ಟಿ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಇಲಾಖೆ ಅಧಿಕಾರಿ ಸೂಡಿಶಟ್ರರಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಲಾನಯನ, ತೋಟಗಾರಿಕೆ, ಅರಣ್ಯ, ಪಶು ವೈದ್ಯಕೀಯ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮುಂತಾದ ಇಲಾಖೆಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಶಾಸಕರೇ ಅಧಿಕಾರಿಗಳ ಹಾಜರಾತಿ ಪುಸಕ್ತವನ್ನು ಪರಿಶೀಲಿಸಿದ್ದು ವಿಶೇಷವಾಗಿ ಕಂಡು ಬಂದಿತು. ತಾ.ಪಂ. ಅಧ್ಯಕ್ಷ ಶಿವಕುಮಾರ ಸಾಲಮನಿ ಅಧ್ಯಕ್ಷತೆ ವಹಿಸಿದ್ದರು. ಭೆಯಲ್ಲಿ ಜಿ.ಪಂ.ಸದಸ್ಯ ರಮೇಶ ಮುಂದಿನಮನಿ ಉಪಾಧ್ಯಕ್ಷ ಶಿವಕುಮಾರ ನೀಲಗುಂದ ಸೇರಿದಂತೆ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.