ರೋಣ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳ ಪ್ರಯಾಣಿಕರ ಅನುಕೂಲಕ್ಕಾಗಿ ನೂತನವಾಗಿ ರೋಣ- ಧರ್ಮಸ್ಥಳ ಸಾರಿಗೆಯನ್ನು ಪ್ರತಿದಿನ ಬೆಳಿಗ್ಗೆ 9 ಗಂಟೆಗೆ ರೋಣದಿಂದ ಹೊರಟು ರಾತ್ರಿ 10 ಗಂಟೆಯ ಸುಮಾರಿಗೆ ಧರ್ಮಸ್ಥಳ ತಲುಪಲಿದೆ. ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.
ಅವರು ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಭಾನುವಾರ ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಸರಕಾರ ಸಹಾಯದೊಂದಿಗೆ ಹಿರಿಯ ನಾಗರಿಕರಿಗೆ ಶೇ 25 ರಷ್ಟು ಕಡಿಮೆ ರಿಯಾಯತಿ, ಅಂಗವಿಕಲರಿಗೆ 100 ಕಿ.ಮೀ. ದೂರದವರೆಗೆ ಪ್ರಯಾಣ ಮಾಡಲು ರಿಯಾಯತಿಯಲ್ಲಿ ಪಾಸುಗಳು ಸೇರಿದಂತೆ ವಿವಿಧ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು. ಈ ಸಮಯದಲ್ಲಿ ಹಾವೇರಿ ಲೋಕಸಭಾ ಮತಕ್ಷೇತ್ರದ ಯುವ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಮಿಥುನ್ ಜಿ.ಪಾಟೀಲ, ಪುರಸಭೆ ಅಧ್ಯಕ್ಷ ಮುತ್ತಣ್ಣ ಸಂಗಳದ, ಸಂಗು ನವಲಗುಂದ ಇತರರು ಹಾಜರಿದ್ದರು.